ಬೆಂಗಳೂರು: ಮೂರು ತಿಂಗಳ ಗರ್ಭಿಣಿಯ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪತಿ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆಯ ಅನ್ನಪೂರ್ಣೆಶ್ವರಿ ಬಡಾವಣೆಯಲ್ಲಿ ನಡೆದಿದೆ.
ವನಿತಾ (25) ಮೃತ ದುರ್ದೈವಿ. ಈಕೆಯ ಪತಿ ಶಶಿಧರ್ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ನಿವೃತ್ತ ಪೊಲೀಸ್ ಅಧಿಕಾರಿಯ ಮಗನಾದ ಶಶಿಧರ್ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ನಂಬಿಸಿ, ತುಮಾಕೂರು ಜಿಲ್ಲೆ ನಂದಿಹಳ್ಳಿಯ ವನಿತಾಳನ್ನು ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ. ಮದುವೆಯಾದ ಬಳಿಕ ಒಂದು ದಿನವೂ ಆತ ಕೆಲಸಕ್ಕೆ ಹೋಗಿರಲಿಲ್ಲ. ವಿವಿಧ ಚಟಗಳನ್ನು ಮೈಗೂಡಿಸಿಕೊಂಡು ಮನೆಯಲ್ಲೇ ಇರುತಿದ್ದ. ಇದರಿಂದ ಪತಿ – ಪತ್ನಿ ನಡುವೆ ವೈಮನಸ್ಸು ಏರ್ಪಟ್ಟಿತ್ತು. ಈ ಕಾರಣಕ್ಕೆ ವನಿತಾ ತವರು ಮನೆಗೆ ಹೋಗಿದ್ದಳು.
ಇತ್ತೀಚಿಗೆ ಪತ್ನಿಯ ತವರು ಮನೆಗೆ ತೆರಳಿದ ಶಶಿಧರ್, ಇನ್ನುಮುಂದೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಆಮೇಲೆ ಏನಾಯೋ ಗೊತ್ತಿಲ್ಲ, ವನಿತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಸಂಬಂಧ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.