ಬೆಂಗಳೂರು: ದಿ.ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಯ ಪುತ್ರನಿಗೆ ಇಂದು ತೊಟ್ಟಿಲು ಶಾಸ್ತ್ರ ನೆರವೇರಿದೆ. ಚಿರು ಅಗಲಿಕೆಯ ನೋವಿನಲ್ಲಿದ್ದ ಎರಡೂ ಕುಟುಂಬದ ಮೊಗದಲ್ಲಿ ಜೂನಿಯರ್ ಚಿರು ಆಗಮನ ಖುಷಿಯ ಬುತ್ತಿ ತಂದಿದ್ದಾನೆ. ಚಿರು ನಿಧನದ ಬಳಿಕ ಮಾಧ್ಯಮಗಳಿಂದ ದೂರವೇ ಉಳಿದಿದ್ದ ಮೇಘನಾ, ಜೂ.ಚಿರು ತೊಟ್ಟಿಲ ಶಾಸ್ತ್ರದ ಶುಭದಿನದಂದು ಮನಬಿಚ್ಚಿ ಮಾತನಾಡಿದ್ದಾರೆ.
ನನಗೆ ನನ್ನ ಮಗನೇ ಶಕ್ತಿ, ಸ್ಪೂರ್ತಿ. ಚಿರು ಎಲ್ಲಾ ನನ್ನ ಕೈಯಿಂದ ಮಾಡಿಸಿದ್ದಾರೆ. ಚಿರು ಅಗಲಿಕೆಯ ನೋವು ಮರೆಯೋದು ಅಸಾಧ್ಯ. ಮಗನನ್ನು ನೋಡಿದರೆ ಚಿರು ರೀತಿಯೇ ಕಾಣಿಸುತ್ತಿದ್ದಾರೆಂದು ನಟಿ ಮೇಘನಾ ರಾಜ್ ಹೇಳಿದ್ದಾರೆ. ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕೆಂಬುದನ್ನು ನಾನು ಚಿರುವಿನಿಂದ ಕಲಿತೆ. ಚಿರು ಅಂದರೆ, ನನ್ನ ಹ್ಯಾಪಿನೆಸ್. ಮಗನ ಆಗಮನ ಡಬಲ್ ಸಂಭ್ರಮ ಬಂದಿದೆ ಎಂದು ಹೇಳಿದ್ದಾರೆ.
ಇಂದಿನ ತೊಟ್ಟಿಲು ಶಾಸ್ತ್ರ ಹೊಸ ರೀತಿಯ ಸಂತೋಷವನ್ನು ತಂದಿದೆ. ಮಗ ಮನೆಗೆ ಬಂದಿದ್ದಾನೆ. ತುಂಬಾ ಖುಷಿಯಾಗಿದೆ. ತೊಟ್ಟಿಲು ತವರು ಮನೆಯಿಂದ ಬಂದಿದೆ. ಜನರು ನನ್ನನ್ನು, ಚಿರು ಹಾಗೂ ನಮ್ಮ ಕುಟುಂಬವನ್ನು ಮನೆಯವರಂತೆಯೇ ನೋಡಿಕೊಂಡಿದ್ದಾರೆ. ಇದೀಗ ನಾನು ಸ್ಟ್ರಾಂಗ್ ಇದ್ದೀನೋ, ಇಲ್ಲವೋ ಗೊತ್ತಿಲ್ಲ. ಆದರೆ, ಎಲ್ಲರೂ ಸ್ಟ್ರಾಂಗ್ ಆಗಿದ್ದೀನಿ ಎಂದು ಹೇಳುತ್ತಿದ್ದಾರೆ.
ಶೀಘ್ರದಲ್ಲೇ ಮಗುವಿನ ನಾಮಕರಣವನ್ನು ನೆರವೇರಿಸಲಾಗುತ್ತದೆ. ಒಳ್ಳೆಯ ಸಮಯವನ್ನು ನೋಡಿ ಮಾಡಲಾಗುತ್ತದೆ. ಹೆಸರನ್ನು ಇನ್ನೂ ನಿರ್ಧಾರ ಮಾಡಿಲ್ಲ. ಕೆಲ ಅಕ್ಷರಗಳು ಬಂದಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಚಿರು ಮಗನಾಗಿರುವ ಕಾರಣ ವಿಶೇಷವಾದ ಹೆಸರಿಗಾಗಿ ಹುಡುಕುತ್ತಿದ್ದೇವೆಂದು ಹೇಳಿದರು.
ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಾಯ್ ನಿವಾಸದಲ್ಲಿ ಶಾಸ್ತ್ರೋಕ್ತವಾಗಿ ಚಿರು ಪುತ್ರನ ತೊಟ್ಟಿಲು ಶಾಸ್ತ್ರ ನೆರವೇರಿದ್ದು, ಕುಟುಂಬ ಸದಸ್ಯರು ಭಾಗಿಯಾಗಿದ್ದರು. ಇನ್ನು ಮಗುವಿಗಾಗಿ ಗದಗ ಮಹಿಳಾ ಸಂಘದ ವತಿಯಿಂದ ಬಣ್ಣ ಬಣ್ಣದ ಚಿತ್ತಾರವುಳ್ಳ ವಿಶೇಷವಾದ ಹ್ಯಾಂಡ್ ಮೇಡ್ ತೊಟ್ಟಿಲು ನೀಡಲಾಗಿದ್ದು, ಅಭಿಮಾನಿಗಳು ನೀಡಿರುವ ಈ ತೊಟ್ಟಿಲಿನಲ್ಲಿಯೇ ತೊಟ್ಟಿಲು ಶಾಸ್ತ್ರ ನೆರವೇರಿಸಲಾಗಿದೆ.