ಮಂಗಳೂರು: ರಾಜ್ಯದಲ್ಲೀಗ ನಿಮ್ಮದೇ ಸರ್ಕಾರವಿದೆ. ಹಾಗಿರುವಾಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ಬಗ್ಗೆ ಎರಡು ತಿಂಗಳಿನಿಂದ ಬರೀ ಚರ್ಚೆ ಯಾಕೆ..? ಈ ಬಗ್ಗೆ ಸಂಪುಟ ಪ್ರಸ್ತಾಪ ಮಾಡಿ. ಚರ್ಚಿಸುವ ಎಂದು ಶಾಸಕ ಯುಟಿ ಖಾದರ್ ಸವಾಲೆಸೆದಿದ್ದಾರೆ.
ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೀಗ ಬಿಜೆಪಿ ಸರ್ಕಾರವು ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳುತ್ತಲ್ಲೇ ಇದ್ದು ಈವರೆಗೂ ಜಾರಿಗೆ ಬಂದಿಲ್ಲ. ‘ಎಪಿಎಂಸಿ ಕಾನೂನು ರಾತ್ರಿ ಬೆಳಗಾಗುವುದರೊಳಗೆ ತಂದಿದ್ದೀರಿ. ನಿಮಗೆ ಎಲ್ಲಾ ಕಾನೂನನ್ನು ರಾತ್ರಿ ಬೆಳಗಾಗುವುದರೊಳಗೆ ಜಾರಿಗೆ ತರಲಾಗುತ್ತದೆ. ಆದರೆ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ’ ಎಂದು ಪ್ರಶ್ನಿಸಿದ್ದಾರೆ.
“ಗೋ ಹತ್ಯೆ ನಿಷೇಧ ತರುತ್ತೇವೆ ಎಂದು ಹಲವು ವರ್ಷಗಳಿಂದ ಹೇಳಿಕೊಂಡೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಭಾರತದಿಂದಲ್ಲೇ ವಿದೇಶಗಳಿಗೆ ಹೆಚ್ಚು ಗೋ ಮಾಂಸ ರಫ್ತಾಗುತ್ತಿದೆ. ಆದರೆ ಅವರಿಗೆ ಕಾನೂನು ಜಾರಿಗೆ ತರಲು ಆಗಿದೆಯೇ? ಗೋ ಹತ್ಯೆ ತಡೆಯುವ ಕಾನೂನು ಇಂದಿರಾ ಗಾಂಧಿ ಆಡಳಿತದಲ್ಲಿ ತಂದಿರುವುದೇ ಹೊರತು ಬಿಜೆಪಿಯು ಒಂದೇ ಒಂದು ಕಾನೂನು ಜಾರಿಗೆ ತಂದಿಲ್ಲ” ಎಂದಿದ್ದಾರೆ.
“ಈ ಗ್ರಾಮ ಪಂಚಾಯತಿ ಚುನಾವಣೆ ಸಮೀಪವಾಗುತ್ತಿರುವ ನಿಟ್ಟಿನಲ್ಲಿ ಬಿಜೆಪಿಯು ಬರೀ ಭಾವಾನಾತ್ಮಕ ವಿಚಾರಗಳನ್ನು ತೆಗೆದುಕೊಂಡು ಬಂದು ಜನರನ್ನು ವಿಭಜಿಸಿ ಮತ ಪಡೆಯುವ ತಂತ್ರ ನಡೆಸುತ್ತಿದೆ. ಬದಲಾಗಿ ಅವರು ಈ ಕಾನೂನನ್ನು ಜಾರಿ ಮಾಡುವುದಿಲ್ಲ” ಎಂದು ಹೇಳಿದ್ದಾರೆ.