ಮಂಗಳೂರು: ಕೊರೋನಾ ಭೀತಿಯಿಂದಾಗಿ ಮುಚ್ಚಲ್ಪಟ್ಟಿದ್ದ ಶಾಲೆಗಳನ್ನು ನಿಧಾನವಾಗಿ ತೆರೆಯುವ ಪ್ರಕ್ರಿಯೆ ಶುರುವಾಗಿರುವ ಬೆನ್ನಲ್ಲೇ ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ಮೃತರನ್ನು ಬಿಕರ್ನಕಟ್ಟೆ ನಿವಾಸಿ, ಗ್ರೆಟಾ ಡಿಸೋಜಾ(40) ಎಂದು ಗುರುತಿಸಲಾಗಿದೆ.
ಇವರು ಬಿಕರ್ನಕಟ್ಟೆ ಸೌಜನ್ಯ ಲೇನ್ನಲ್ಲಿರುವ ತನ್ನ ಮನೆಯ ಆವರಣದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ, ಗ್ರೆಟಾ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ನಿದ್ರೆಯ ಸಮಸ್ಯೆಯ ಬಗ್ಗೆ ಅವರು ತಮ್ಮ ಕೆಲ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರೆಟ್ಟಾ ಅವರು ಪುತ್ರ ಮತ್ತು ಪುತ್ರಿಯ ಜತೆ ಬಿಕರ್ನಕಟ್ಟೆಯಲ್ಲಿ ವಾಸ್ತವ್ಯ ಮಾಡುತ್ತಿದ್ದು, ಆಕೆಯ ಪತಿ ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದರು. ತಿಂಗಳಿಗೊಮ್ಮೆ ಮಂಗಳೂರಿಗೆ ಬಂದು ಹೋಗುತ್ತಿದ್ದರು. ಅವರು ಈ ಹಿಂದೆ ಕಳೆದ ನವೆಂಬರ್ನಲ್ಲಿ ಮಂಗಳೂರಿಗೆ ಬಂದು ಹೋಗಿದ್ದರು.