ಕುಂದಾಪುರ : ಮಾರ್ಬಲ್ ಲಾರಿಯಿಂದ ಇಳಿಸುವ ವೇಳೆ ಮಾರ್ಬಲ್ ಮೈ ಮೇಲೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕುಂದಾಪುರದ ತ್ರಾಸಿ ಸಮೀಪದ ಕಂಚುಗೋಡು ಬೀಚ್ ಬಳಿ ನಡೆದಿದೆ.
ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು ಒಬ್ಬನನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಶ್ಚಿಮ ಬಂಗಾಲ ಮೂಲದ ಗಣಪತಿ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ.
ಕಂಚುಗೋಡು ಬೀಚ್ ಸಮೀಪ ನಿರ್ಮಾಣವಾಗುತ್ತಿದ್ದ ಖಾಸಗಿ ರೆಸಾರ್ಟ್ವೊಂದರ ಕಾಮಗಾರಿ ಸಲುವಾಗಿ ಪಶ್ಚಿಮ ಬಂಗಾಲದಿಂದ ಲಾರಿಯಲ್ಲಿ ಮಾರ್ಬಲ್ಗಳನ್ನು ಬುಧವಾರ ತರಿಸಲಾಗಿದೆ. ಬೃಹತ್ ಸರಕು ಆಗಿರುವುದರಿಂದ ಬುಧವಾರದಿಂದಲೇ 5-6 ಮಂದಿಯ ತಂಡವು ಲಾರಿಯಿಂದ ಮಾರ್ಬಲ್ಗಳನ್ನು ಇಳಿಸುತ್ತಿದ್ದರು. ಗುರುವಾರ ಸಂಜೆ ವೇಳೆಗೆ ಅರ್ಧದಷ್ಟು ಇಳಿಸಿ ಆಗಿತ್ತು. ಸಂಜೆ 6 ಗಂಟೆ ಸುಮಾರಿಗೆ ಇಳಿಸುತ್ತಿರುವ ವೇಳೆ ಮೂವರ ಮೇಲೆ ಬೃಹತ್ ಮಾರ್ಬಲ್ ಮೇಲೆ ಬಿದ್ದಿದೆ.
ಮಾರ್ಬಲ್ ಅಡಿಗೆ ಬಿದ್ದವರನ್ನು ಕೂಡಲೇ ಸ್ಥಳೀಯರೆಲ್ಲ ರಕ್ಷಿಸಲು ಪ್ರಯತ್ನಿಸಿದ್ದಾರೆ. ತತ್ಕ್ಷಣ ಸ್ಥಳಕ್ಕಾಗಮಿಸಿದ 24×7 ಇಬ್ರಾಹಿಂ ಗಂಗೊಳ್ಳಿ ಅವರು ಆಂಬುಲೆನ್ಸ್ ಮೂಲಕ ಮೂವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಗೊಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.