ಮಂಗಳೂರು: ಸ್ವಸಹಾಯ ಸಂಘಗಳಲ್ಲಿ ಸಕ್ರಿಯರಾಗಿರುವ ಪ್ರತಿಯೊಬ್ಬ ಮಹಿಳಾ ಸದಸ್ಯರು ಆರ್ಥಿಕ ಸಬಲೀಕರಣ ಸಾಧಿಸುವಂತೆ ಮಾಡಲು ಸರಕಾರದ ವತಿಯಿಂದಲೇ ಇ-ಕಾಮರ್ಸ್ ವ್ಯವಸ್ಥೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಘೋಷಣೆ ಮಾಡಿದ್ದಾರೆ.
ಮಂಗಳೂರು ಪುರಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಮಹಿಳಾ ಸಂಜೀವಿನಿ ಒಕ್ಕೂಟಗಳ ಸದಸ್ಯರ ಸಭೆಯಲ್ಲಿ ಸಚಿವರು ಮಾತನಾಡಿದರು. ಮಹಿಳಾ ಸ್ವಸಹಾಯ ಸಂಘಗಳಲ್ಲಿ ಈಗ ತರಹೇವಾರಿ ಉತ್ಪನ್ನಗಳು ತಯಾರಾಗುತ್ತಿದ್ದು, ಭಾರೀ ವಹಿವಾಟು ನಡೆಯುತ್ತಿದೆ. ಇದರಲ್ಲಿ ಅಕ್ರಮಕ್ಕೆ ಎಡೆ ಮಾಡಿಕೊಡಬಾರದೆನ್ನುವ ಉದ್ದೇಶದಿಂದ ಈ ಸಂಘಗಳ ವಹಿವಾಟು ಸ್ವರೂಪವನ್ನೆಲ್ಲಾ ಸಂಪೂರ್ಣ ಡಿಜಿಟಲೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಅಮೆಜಾನ್ ಮತ್ತು ಫ್ಲಿಫ್ಕಾರ್ಟ್ ತರಹದ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.
ಅಲ್ಲದೇ, ಮಹಿಳೆಯರು ತಯಾರಿಸುವ ಉತ್ಪನ್ನಗಳು ಸುರಕ್ಷಿತವಾಗಿ ಇಟ್ಟುಕೊಳ್ಳಲು ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಒಂದು ಗೋದಾಮು ಕಟ್ಟಡವನ್ನು ನಿರ್ಮಿಸಿ ಕೊಡಲಾಗುವುದು. ಈ ಯೋಜನೆಯಡಿ ಹಲವೆಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದೆಡೆಗಳಲ್ಲೂ ತ್ವರಿತ ಗತಿಯಲ್ಲಿ ಕಟ್ಟಡವನ್ನು ಕಟ್ಟಿಕೊಡಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು
ರಾಜ್ಯದಲ್ಲಿ 20 ಲಕ್ಷ ಮಹಿಳೆಯರು ಸ್ವಸಹಾಯ ಸಂಘಗಳಲ್ಲಿ ಸದಸ್ಯೆಯರಾಗಿದ್ದು, ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 62 ಸಾವಿರ ಸದಸ್ಯೆಯರಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸಚಿವ ಅಶ್ವಥ್ ನಾರಾಯಣ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.