ಉಡುಪಿ : ಮನೆ ಕಟ್ಟಲು ಮಾಡಿದಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕದಿಂದ ವ್ಯಕ್ತಿಯೊಬ್ಬರು ಮದ್ಯಕ್ಕೆ ವಿಷ ಸೇವಿಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಡುಬಿದ್ರೆಯ ಪೂಂದಾಡು ದರ್ಕಾಸ್ತಿನಲ್ಲಿ ನಡೆದಿದೆ. ಪೂಂದಾಡು ದರ್ಕಾಸ್ತು ನಿವಾಸಿ ಅಶೋಕ ವಿ. ಮೂಲ್ಯ (39) ಮೃತ ದುರ್ದೈವಿ.
ಅಶೋಕ್ ಮೂಲ್ಯ ಕೂಲಿ ಕೆಲಸ ಮಾಡಿಕೊಂಡಿದ್ದು, ಅವರು ಪೆರ್ಡೂರು ಗ್ರಾಮದ ಜೋಗಿಬೆಟ್ಟುವಿನಲ್ಲಿ ಜಾಗ ಖರೀದಿ ಮಾಡಿ ಮನೆ ಕಟ್ಟುವ ಸಲುವಾಗಿ ಬ್ಯಾಂಕಿನಿಂದ ಸುಮಾರು 6 ಲಕ್ಷ ರೂ. ಸಾಲ ಪಡೆದಿದ್ದರು. ಅರ್ಧದಷ್ಟು ಮನೆಯ ಕಾಮಗಾರಿ ಮುಗಿಸಿದ್ದು, ಕೊರೊನಾ ಕಾರಣದಿಂದ ಬ್ಯಾಂಕಿನ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಬ್ಯಾಂಕಿನವರು ಮನೆ ಮತ್ತು ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದರು.
ಅದೇ ಚಿಂತೆಯಲ್ಲಿ ಅಶೋಕ್ ಮದ್ಯಪಾನ ಮಾಡುತ್ತಿದ್ದರು. ಜೂ. 7ರಂದು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿ ರಾತ್ರಿ ಬಂದು ತೆಂಕ ಎರ್ಮಾಳು ಗ್ರಾಮದ ಪೂಂದಾಡು ದರ್ಖಾಸ್ತುವಿನಲ್ಲಿರುವ ಮನೆಯಲ್ಲಿ ರಾತ್ರಿ ಮಲಗಿದ್ದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.