ವಿಟ್ಲ: ವಿಷ ಸೇವಿಸಿ, ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕು ಸೂರಿಕುಮೇರು ಪಡ್ಪು ಎಂಬಲ್ಲಿ ನಡೆದಿದೆ. ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಜನಾರ್ದನ ಮೂಲ್ಯ(54) ಆತ್ಮಹತ್ಯೆಗೆ ಶರಣಾದವರು.
ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಟಿಸಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಜರ್ನಾದನ ಮೂಲ್ಯ ಅವರು ಏಪ್ರಿಲ್ 17 ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಮರುದಿನ ಕೆಲಸಕ್ಕೆ ತೆರಳದೇ ಮನೆಯಲ್ಲಿಯೇ ಇದ್ದರು. ಮಧ್ಯಾಹ್ನದ ವೇಳೆ ವಿಷ ಸೇವಿಸಿ ಬಾವಿಗೆ ಹಾರಿದ್ದಾರೆ.
ಇದನ್ನು ಗಮನಿಸಿದ ಅವರ ಪತ್ನಿ ರೇಣುಕಾ ಹಾಗೂ ಪುತ್ರ ಪ್ರಜ್ವಲ್ ಹಗ್ಗದ ಸಹಾಯದಿಂದ ಅವರನ್ನು ಮೇಲಕ್ಕೆತ್ತಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಅವರು ನಿನ್ನೆ (ಏಪ್ರಿಲ್ 18) ನಿಧನರಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.