ಸುಬ್ರಮಣ್ಯ: ಇಲ್ಲಿನ ಹರಿಹರ ಪಲ್ಲತಡ್ಕದ ಮುಖಂಡರೊಬ್ಬರು ಅಕ್ರಮವಾಗಿ ಪಿಕಪ್ ನಲ್ಲಿ ಗೋ ಸಾಗಾಟ ಮಾಡುತ್ತಿದ್ದಾಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅವರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದು ತಂದವರ ಮನೆಗೆ ವಾಪಾಸ್ ಕಳುಹಿಸಿದ ಘಟನೆ ನಡೆದಿದೆ.
ನಿನ್ನೆ ರಾತ್ರಿ ಪಲ್ಲತ್ತಡ್ಕದ ವ್ಯಕ್ತಿ ಪಿಕಪೊಂದರಲ್ಲಿ ಎರಡು ಗೋವುಗಳನ್ನು ಕೊಂಡೊಯ್ಯುತಿದ್ದರೆನ್ನಲಾಗಿದೆ. ಇದನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಿಂದೂ ಸಂಘಟನೆಯೊಂದರ ಸದಸ್ಯರು ನಿಲ್ಲಿಸಿ ಪ್ರಶ್ನಿಸಿದ್ದು, ದನ ಸಾಗಿಸುವ ಲೈಸನ್ಸ್ ಕೇಳಿದರೆನ್ನಲಾಗಿದೆ. ಅಲ್ಲದೆ ಅಕ್ರಮ ಸಾಗಾಟದ ಆರೋಪ ಹೊರಿಸಿ, ಲೈಸೆನ್ಸ್ ಹೊಂದಿಲ್ಲದ ಕಾರಣ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭ ಇತ್ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ದನಗಳನ್ನು ಸಂಬಂಧಿಕರ ಮನೆಗೆ ಕೊಂಡೊಯ್ಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ತಡೆದವರು ಇದನ್ನು ಒಪ್ಪಲು ಸಿದ್ಧವಿರಲಿಲ್ಲ. ಪ್ರಕರಣ ಸುಬ್ರಹ್ಮಣ್ಯ ಠಾಣೆಗೆ ಮೆಟ್ಟಿಲೇರಿ ಅಲ್ಲಿ ಮಾತುಕತೆ ನಡೆದಿದ್ದು, ಈ ವೇಳೆ ಕೆಲ ಬಿಜೆಪಿ ಮುಖಂಡರೂ ಅಲ್ಲಿಗೆ ಬಂದರೆನ್ನಲಾಗಿದೆ. ಮಾತುಕತೆ ಬಳಿಕ ಗೋವುಗಳನ್ನು ವಾಪಸು ತಂದವರ ಮನೆಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.