ಮುಂಬೈ : ಭಯೋತ್ಪಾದಕ ಸಂಘಟನೆ ಜೊತೆಗೆ ನಂಟು ಹೊಂದಿದ್ದ ವ್ಯಕ್ತಿಯೋರ್ವನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಯನ್ನು ಇಂದು ಪುಣೆಯ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ .ಬಂಧಿತ ಆರೋಪಿಯನ್ನು ಜುನೈದ್ ಎಂದು ಗುರುತಿಸಲಾಗಿದೆ. ಜುನೈದ್ ಬಹಳ ದಿನಗಳಿಂದ ಪುಣೆಯಲ್ಲಿ ನೆಲೆಸಿದ್ದು, ಆತ ಲಷ್ಕರ್-ಎ ತೈಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದನು. ಹಾಗೂ ಆರೋಪಿ ಎಲ್ಇಟಿಗೆ ಭಯೋತ್ಪಾದಕರನ್ನು ಸೇರಿಸಿಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದನು ಎನ್ನಲಾಗಿದೆ.
ನಿಷೇಧಿತ ಲಷ್ಕರ್-ಎ-ತೊಯ್ದಾ (ಎಲ್ಇಟಿ) ಸಂಘಟನೆಯ ಐವರು ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಕೆಲವು ದಿನಗಳ ಹಿಂದೆ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಸರಪಂಚ್ ಹತ್ಯೆಯಲ್ಲಿ ಈ ಐವರು ಭಯೋತ್ಪಾದಕರಲ್ಲಿ ಮೂವರು ಶಾಮೀಲಾಗಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಸೋಮವಾರ ಶ್ರೀನಗರದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಪೊಲೀಸರು ಬಂಧಿಸಿದರೆ, ಉಳಿದ ಮೂವರನ್ನು ಬಾರಾಮುಲ್ಲಾದಲ್ಲಿ ಬಂಧಿಸಿದ್ದಾರೆ.