ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಗೆ ತೆರಿಗೆ ಕಟ್ಟಲು ಹಣವಿಲ್ಲ ಎಂದ ಕಾರಣಕ್ಕೆ
ಮದ್ರಾಸ್ ಹೈ ಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸುವುದರ ಜೊತೆಗೆ ರೀಲ್ ಹೀರೋಗಳು ತೆರಿಗೆ ಕಟ್ಟಲು ಹಿಂದೇಟು ಹಾಕುತ್ತಾರೆ ಎಂದು ಟೀಕಿಸಿದೆ.
2012ರಲ್ಲಿ ಇಂಗ್ಲೆಂಡ್ ನಿಂದ ಆಮದು ಮಾಡಿಕೊಂಡ ಸುಮಾರು 8 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರಿಗೆ ತೆರಿಗೆ ವಿನಾಯಿತಿಯನ್ನು ಕೋರಿ ತಮಿಳು ನಟ ಮದ್ರಾಸ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು, ತೆರಿಗೆ ವಿನಾಯಿತಿಯ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ನ್ಯಾ.ಎಸ್.ಎಮ್.ಸುಬ್ರಮಣಿಯಮ್ ಅವರಿದ್ದ ಪೀಠವು, ನಿಜವಾದ ಹೀರೋಗಳು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟುತ್ತಾರೆ. ನೀವು ನಿಜ ಜೀವನದ ಹೀರೋಗಳಾಗಿ, ಅದು ಬಿಟ್ಟು ಬರಿ ತೆರೆಯ ಮೇಲಿನ ಹೀರೋಗಳಾಗಿ ಉಳಿಯಬೇಡಿ ಎಂದು ವಿಜಯ್ ಅವರಿಗೆ ಛಾಟಿ ಬೀಸಿದೆ.ಜೊತೆಗೆ ನ್ಯಾಯಾಲಯವು 1ಲಕ್ಷ ರೂ.ಗಳ ದಂಡವನ್ನೂ ವಿಜಯ್ಗೆ ವಿಧಿಸಿದ್ದು, ಅದನ್ನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸುವಂತೆ ತಿಳಿಸಿದೆ.
ವಿಜಯ್ ಅವರ ವರ್ತನೆಯು ಬಹಳ ಜನರನ್ನು ಪ್ರಭಾವಿಸುವ ಸಾಮರ್ಥ್ಯವನ್ನು ಹೊಂದಿದ್ದು, ತಮಿಳುನಾಡಿನಂತಹ ರಾಜ್ಯದಲ್ಲಿ ಚಿತ್ರ ನಟರು ಬೇರೆಲ್ಲರಿಗಿಂತ ಹೆಚ್ಚು ಜನರನ್ನು ಪ್ರಭಾವಿಸುತ್ತಾರೆ. ನಟರೇ ಹೀಗೆ ಮಾಡಿದರೆ ತಪ್ಪು ಸಂದೇಶ ಹೋದಂತಾಗುತ್ತದೆ. ನಿಜವಾದ ನಾಯಕನಾದವನು ದೇಶಕ್ಕೆ ಕಟ್ಟಬೇಕಾದ ತೆರಿಗೆಯನ್ನು ತಪ್ಪದೇ ಕಟ್ಟುತ್ತಾನೆ ಎಂದಿದೆ.
ಇನ್ನು ವಿಜಯ್ ಸಲ್ಲಿಸಿದ ಅರ್ಜಿಯಲ್ಲಿ ತನ್ನ ಉದ್ಯೋಗವನ್ನು ತಿಳಿಸದೆ ಇರುವುದನ್ನು ನ್ಯಾಯಾಧೀಶರು ಟೀಕಿಸಿದ್ದಾರೆ. ಅರ್ಜಿದಾರರು ತಮ್ಮ ಅಫಿಡವಿಟ್ನಲ್ಲಿ ತಮ್ಮ ವೃತ್ತಿ ಅಥವಾ ಉದ್ಯೋಗವನ್ನು ಸಹ ತಿಳಿಸಿಲ್ಲ ಎಂಬುದು ಆಶ್ಚರ್ಯಕರವಾಗಿದೆ. ಇಂಗ್ಲೆಂಡ್ನಿಂದ ಪ್ರತಿಷ್ಠಿತ ದುಬಾರಿ ಕಾರನ್ನು ಆಮದು ಮಾಡಿಕೊಂಡಿದ್ದಾರೆ. ಆದರೆ ದುರದೃಷ್ಟವಶಾತ್, ಕಾನೂನು ಪ್ರಕಾರ ಪ್ರವೇಶ ತೆರಿಗೆಯನ್ನು ಪಾವತಿಸಿಲ್ಲ. ತೆರಿಗೆ ಪಾವತಿಸುವುದನ್ನು ತಪ್ಪಿಸಲು ಅವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಖ್ಯಾತ ನಟರಾಗಿರುವ ಅರ್ಜಿದಾರರು ತೆರಿಗೆಯನ್ನು ತ್ವರಿತವಾಗಿ ಮತ್ತು ಸಮಯೋಚಿತವಾಗಿ ಪಾವತಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಅಭಿಮಾನಿಗಳು ನಟರನ್ನು ನಿಜವಾದ ನಾಯಕನಂತೆ ನೋಡುತ್ತಾರೆ. ಅಂತಹ ನಟರು ರಾಜ್ಯದ ಆಡಳಿತಗಾರರಾಗಿರುವ ತಮಿಳುನಾಡಿನಂತಹ ರಾಜ್ಯದಲ್ಲಿ ರೀಲ್ ಹೀರೋನಂತೆ ವರ್ತಿಸುವುದು ಸರಿಯಲ್ಲ. ತೆರಿಗೆ ವಂಚನೆ ರಾಷ್ಟ್ರ ವಿರೋಧಿ ಅಭ್ಯಾಸ, ವರ್ತನೆ ಮತ್ತು ಮನಸ್ಥಿತಿ. ಅಸಂವಿಧಾನಿಕ ಎಂದು ನಿರ್ಣಯಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಇನ್ನು ಎರಡು ವಾರಗಳಲ್ಲಿ ತೆರಿಗೆಯನ್ನು ಪಾವತಿಸುವಂತೆ ನ್ಯಾಯಾಲಯವು ನಟನಿಗೆ ನಿರ್ದೇಶನ ನೀಡಿದೆ.