ಬಾಗಲಕೋಟೆ: ಇಲ್ಲಿನ ರಬಕವಿ – ಬನಹಟ್ಟಿ ತಾಲ್ಲೂಕಿನ ಕುಲ ಹಳ್ಳಿಯಲ್ಲಿ ಕುಲಹಳ್ಳಿ ಗ್ರಾಮದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿ ಅಜ್ಜಿ ಶಾರದಾ ಮೋನೇಶ ಕಂಬಾರ ತನ್ನ ಪತಿಯನ್ನು ಕಳೆದುಕೊಂಡು 2 ವರ್ಷಗಳಾಗಿವೆ. ಸದಾ ಆತನನ್ನು ಜಪಿಸುತ್ತಲೇ ಬದುಕುತ್ತಿರುವ ಶಾರದಾ ಹಾವಿನ ರೂಪದಲ್ಲಿ ಪತಿ ನನ್ನ ಮನೆಗೆ ಬಂದಿದ್ದಾನೆ ಎಂದು ಕಳೆದ ನಾಲ್ಕು ದಿನಗಳಿಂದ ಅದರ ಜೊತೆಗೆ ವಾಸವಾಗಿರುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸುವಂತಹ ಘಟನೆ ನಡೆದಿದೆ.
ಅಕ್ಕಪಕ್ಕದ ಜನ ಹಾವನ್ನು ಹೊರಗೆ ಬಿಟ್ಟು ಬರೋಣಾವೆಂದಾಗ, ಮೃತಪಟ್ಟಿರುವ ನನ್ನ ಪತಿ ಈ ಹಾವಿನ ರೂಪದಲ್ಲಿ ಬಂದು ನನ್ನ ಹತ್ತಿರ ಇದ್ದಾರೆ. ಅದಕ್ಕೆ ಯಾರೂ ತೊಂದರೆ ಮಾಡಬಾರದು, ಹಿಡಿಯಬಾರದು ಎಂದು ಅದನ್ನು 4 ದಿನಗಳಿಂದ ಅಜ್ಜಿ ಶಾರದಾ, ತಾನು ಮಲಗುವ ಚಾಪೆ ಮೇಲೆ ಇರಿಸಿ, ಅದನ್ನು ಜೋಪಾನ ಮಾಡುತ್ತಿದ್ದರು. ಹೀಗಾಗಿ ಅಜ್ಜಿಯ ನಂಬಿಕೆ ಹಾಗು ಹಾವನ್ನು ನೋಡಲು ಸುತ್ತಮುತ್ತಲಿನ ಜನ ಮುಗಿ ಬಿದ್ದಿದ್ದರು.
ಇಂದು ಅಜ್ಜಿಯ ಮನವೊಲಿಸಿ ಸಮೀಪದ ಕೃಷ್ಣಾ ನದಿ ತಟದ ಅರಣ್ಯ ಭಾಗದಲ್ಲಿ ಹಾವನ್ನು ಸ್ಥಳೀಯರು ಬಿಟ್ಟು ಬಂದ ಪ್ರಕರಣ ನಡೆದಿದೆ. ನನ್ನ ಪತಿಯು ಹಾವಿನ ರೂಪದಲ್ಲಿ ಹುಟ್ಟಿ ಬಂದಿದ್ದಾನೆ. ಅದಕ್ಕಾಗಿಯೇ ಜೋಪಾನವಾಗಿ ನನ್ನ ಹತ್ತಿರ ಇತ್ತು. ಓಣಿಯವರು ಇಂದು ಹೊರಗೆ ಬಿಟ್ಟು ಬಂದಿದ್ದಾರೆ ಎಂದು ಶಾರದಾ ಮೋನೇಶ ಕಂಬಾರ ಹೇಳಿದ್ದಾರೆ.
ಶಾರದಾ ಎಂಬ ಅಜ್ಜಿಯು ತನ್ನ ಗಂಡನ ರೂಪದಲ್ಲಿ ಹಾವು ಮನೆಗೆ ಬಂದಿದೆ ಎಂದು ತಿಳಿದುಕೊಂಡಿದ್ದಾಳೆ. ಸುತ್ತಲಿನ ಕುಟುಂಬಗಳಿಗೆ ತೊಂದರೆಯಾಗಿ ಭಯದಲ್ಲಿದ್ದರು. ಈ ಕಾರಣದಿಂದ ಹೊಳೆಯ ನಿಸರ್ಗದತ್ತ ಬಿಟ್ಟು ಬಂದೇವು ಅಂತ ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.