ಬೆಳ್ತಂಗಡಿ; ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ದಾಖಲೆಯ ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯ ಅವರು ರೈತರು, ಕೃಷಿಕರು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಆದ್ಯತೆ ನೀಡುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಜನಪರ ಬಜೆಟ್ ಮಂಡಿಸಿದ್ದಾರೆ ಎಂದು ಜಿಲ್ಲಾ ಕೆ ಡಿ ಪಿ ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲಹೇಳಿದ್ದಾರೆ.
ಅದರಲ್ಲೂ ನಿರುದ್ಯೋಗ ಎದುರಿಸುತ್ತಿದ್ದ ಯುವಜನತೆಗೆ 56,432ಸರಕಾರಿ ಹುದ್ದೆ ಭರ್ತಿ ಮಾಡುವ ಬಗ್ಗೆ ಸಿಎಂ ಘೋಷಣೆ ಮಾಡಿದ್ದು, ಐದು ವರ್ಷಗಳ ವಯೋಮಿತಿ ಸಡಿಲಿಕೆ ಮಾಡುವ ಮೂಲಕ ಹಿಂದಿನ ಯಾವುದೇ ಸರ್ಕಾರಗಳು ಮಾಡದ ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಜಿಲ್ಲೆಗಳು, ವರ್ಗಗಳಿಗೂ ಸಮಾನ ಪ್ರಾಮುಖ್ಯತೆ ನೀಡಿ ಅಭಿವೃದ್ಧಿಯೊಂದೇ ತಮ್ಮ ಗುರಿ ಎಂಬುದನ್ನು ನಿರೂಪಿಸಿದ್ದಾರೆ. ಉದ್ಯೋಗಸ್ಥ ಎಸ್.ಸಿ-ಎಸ್.ಟಿ ಮಹಿಳೆಯರಿಗೆ ಮಂಗಳೂರು, ಮೈಸೂರು, ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಾಣ ಮಾಡುವುದಾಗಿ ತಿಳಿಸಿರುವುದು ಮುಂದಿನ ದಿನಗಳಲ್ಲಿ ತುಂಬಾ ಅನುಕೂಲವಾಗಲಿದೆ. ಅದೇ ರೀತಿ ಆರ್ಟಿಇ ಅಡಿ ಪ್ರವೇಶ ಪಡೆದ ಎಸ್ಸಿ, ಎಸ್ಟಿ 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು 19ಕೋಟಿ ರೂ. ಘೋಷಣೆ ಮಾಡಲಾಗಿದೆ. ಎಸ್ಟಿ ಸಮುದಾಯದ ನಿರುದ್ಯೋಗಿಗಳಿಗೆ ಉದ್ಯಮಶೀಲತಾ ಯೋಜನೆಯಡಿ ನಾಲ್ಕು ಲಕ್ಷ ರೂ. ಸಹಾಯಧನ ಘೋಷಣೆ ಮಾಡಲಾಗಿದೆ. ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಎಲೆಚುಕ್ಕಿ, ಹಳದಿ ಚುಕ್ಕಿ ರೋಗ ನಿವಾರಣೆ ಹಾಗೂ ತೆಂಗು ಬೆಳೆಗಾರರ ಸಮಸ್ಯೆಯನ್ನು ನಿವಾರಿಸಲು 10ಕೋಟಿ ರೂ. ಮೀಸಲಿಡಲಾಗಿದೆ. 38ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30ಸಾವಿರ ಕೋಟಿ ರೂ. ಕೃಷಿ ಸಾಲ, ಹಸು, ಎಮ್ಮೆ ಖರೀದಿಸಲು 40ಸಾವಿರ ರೂ. ಪ್ರೋತ್ಸಾಹಧನ, ರೈತರ ಆದಾಯ ವೃದ್ಧಿಗೆ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ 100ಕೋಟಿ ರೂ. ವೆಚ್ಚ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಕೃಷಿ ಮತ್ತು ತೋಟಗಾರಿಕೆಗೆ 8,373ಕೋಟಿ ರೂ. ಹಾಗೂ ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ 4,084ಕೋಟಿ ರೂ. ಮೀಸಲಿಟ್ಟಿರುವುದು ರೈತಪರ ಬಜೆಟ್ ಎಂಬುವುದನ್ನು ನಿರೂಪಿಸುತ್ತದೆ ಎಂದು ದ. ಕ ಜಿಲ್ಲಾ ಕೆ ಡಿ ಪಿ ಯ ಸರಕಾರದ ನಾಮ ನಿರ್ದೇಶಿತ ಸದಸ್ಯರಾದ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ಹೇಳಿಕೆ ನೀಡಿರುತ್ತಾರೆ.


