ಬೆಳ್ತಂಗಡಿ; ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲನಲ್ಲಿ ನಿನ್ನೆ ರಾತ್ರಿ ಮನೆಯ ಹಿಂಬದಿಯ ಗುಡ್ಡ ಕುಸಿದು ಬಿದ್ದು ಮನೆಗೆ ಭಾರಿ ಹಾನಿಯಾಗಿದೆ.
ಭಾರೀ ಮಳೆಗೆ ರಾತ್ರಿಯ ವೇಳೆ ಬಾರಿ ಭೂ ಕುಸಿತ ಉಂಟಾಗಿ ಗಂಡಿಬಾಗಿಲು ನಿವಾಸಿ ಕುರಿಯಾಳಶೇರಿ ಥಾಮಸ್ ಎಂಬವರ ಹೊಸ ಮನೆಗೆ ಹಾನಿಯಾಗಿದೆ. ಎರಡು ತಿಂಗಳ ಹಿಂದೆ ಅಂದರೆ ಮೇ ತಿಂಗಳಲ್ಲಿ ಮನೆಯ ಗೃಹಪ್ರವೇಶ ಕಾರ್ಯ ನಡೆದಿತ್ತು. ಇದೀಗ ಮನೆಯವರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಭೂ ಕುಸಿತದ ತೀವ್ರತೆಗೆ ಮನೆಯ ಕಿಟಕಿ ಹಾಗೂ ಗೋಡೆ ಒಡೆದು ಹೋಗಿದ್ದು ಮನೆಯೊಳಗೆ ಬಂಡೆಕಲ್ಲುಗಳು ಮಣ್ಣು ಹಾಗೂ ನೀರು ನುಗ್ಗಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳಿಗೂ ಹಾನಿಯುಂಟಾಗಿದೆ. ಮನೆಯ ಸುತ್ತ ಕಲ್ಲು, ಮಣ್ಣು ಹಾಗೂ ಹೂಳು ತುಂಬಿದ್ದು ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಧರ್ಮಗುರುಗಳಾದ ಫಾ ಶಾಜಿ ಅವರ ನೇತೃತ್ವದಲ್ಲಿ ತೆರವು ಕಾರ್ಯ ನಡೆಯುತ್ತಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ