ಬೆಂಗಳೂರು: ತನ್ನ ಪತ್ನಿ ಊರಿಗೆ ಹೋಗಿದ್ದಾಳೆ ಎಂದು ಸ್ನೇಹಿತೆಯನ್ನು ಮನೆಗೆ ಕರೆದ ಪತಿಗೆ ಗೆಳತಿ ಭರ್ಜರಿ ಶಾಕ್ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಉತ್ತರಹಳ್ಳಿ ಹೋಬಳಿ ಸಾಲುಹುಣಸೆ ಗ್ರಾಮದ ಅಪಾರ್ಟ್ವೆುಂಟ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಧನಂಜಯ್, ತನ್ನ ಪತ್ನಿ ಮತ್ತು ಮಗನ ಜತೆ ನೆಲೆಸಿದ್ದ. ನ.25ರಂದು ಟೆಕ್ಕಿ ಪತ್ನಿ ತನ್ನ ಸಹೋದರನ ಮದುವೆಗೆಂದು ಮಗನ ಜತೆಗೆ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಡಿ.10ರ ರಾತ್ರಿ ಟೆಕ್ಕಿ, ತನ್ನ ಸ್ನೇಹಿತನಿಗೆ ಫ್ಲ್ಯಾಟ್ನಲ್ಲಿ ತಾನೊಬ್ಬನೇ ಇರುವುದಾಗಿ ತಿಳಿಸಿದ್ದ. ಆತನೇ ಅರ್ಪಿತಾ ಎಂಬಾಕೆ ನಂಬರ್ ಕೊಟ್ಟು ಕರೆ ಮಾಡು ಆಕೆ ಮನೆಗೆ ಬರುತ್ತಾಳೆ ಎಂದು ಹೇಳಿದ್ದ. ಅರ್ಪಿತಾಗೆ ಕರೆ ಮಾಡಿದಾಗ ಆಕೆ ಮಧ್ಯಾಹ್ನ 1 ಗಂಟೆಗೆ ಧನಂಜಯ್ ಫ್ಲ್ಯಾಟ್ಗೆ ಬಂದಿದ್ದಾಳೆ.
ಧನಂಜಯ್ ಮತ್ತು ಅರ್ಪಿತಾ ಇಬ್ಬರೂ ಮನೆಯಲ್ಲೇ ಮದ್ಯದ ಪಾರ್ಟಿ ಮಾಡಿದ್ದಾರೆ. ಬಳಿಕ ಸಿಗರೇಟ್ ಸೇದುವ ಸಲುವಾಗಿ ಸ್ನೇಹಿತೆಯನ್ನು ಮನೆಯಲ್ಲಿಯೇ ಬಿಟ್ಟು ಟೆಕ್ಕಿ ಕಾರಿನಲ್ಲಿ ಸಾಲುಹುಣಸೆಗೆ ಹೋಗಿದ್ದಾನೆ. ಸಿಗರೇಟ್ ಸೇದಿ 15 ನಿಮಿಷಗಳ ಬಳಿಕ ಫ್ಲ್ಯಾಟ್ಗೆ ಬರುವಷ್ಟರಲ್ಲಿ ಅರ್ಪಿತಾ, 27 ಲಕ್ಷ ರೂ. ಮೌಲ್ಯದ ಆಭರಣ, ನಗದು ದೋಚಿ ಕ್ಯಾಬ್ನಲ್ಲಿ ರಾತ್ರೋರಾತ್ರಿ ಹೋಗಿರುವುದು ಗೊತ್ತಾಗಿದೆ.
ಡಿ.12ರಂದು ಧನಂಜಯ್ ಪತ್ನಿ ತನ್ನ ಮಗನನ್ನು ಕರೆದುಕೊಂಡು ಗಂಡನ ಮನೆಗೆ ಬಂದಿದ್ದಾರೆ. ಆಗ ಮನೆಯಲ್ಲಿ ಚಿನ್ನಾಭರಣ ಮತ್ತು ನಗದು ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಪತ್ನಿ ಪ್ರಶ್ನಿಸಿದ್ದಕ್ಕೆ ಟೆಕ್ಕಿ, ತನ್ನ ಸ್ನೇಹಿತೆ ಫ್ಲ್ಯಾಟ್ಗೆ ಬಂದಿದ್ದಳು. ಆಕೆಯೇ 12.70 ಲಕ್ಷ ರೂ. ನಗದು ಮತ್ತು 15 ಲಕ್ಷ ರೂ. ಬೆಲೆ ಬಾಳುವ 300 ಗ್ರಾಂ ಚಿನ್ನಾಭರಣ ದೋಚಿದ್ದಾಳೆ ಎಂದು ಬಾಯ್ಬಿಟ್ಟಿದ್ದಾನೆ.
ಕೊನೆಗೆ ಟೆಕ್ಕಿ ಪೊಲೀಸರಿಗೆ ದೂರು ಕೊಟ್ಟಿದ್ದು, ಕಗ್ಗಲಿಪುರ ಪೊಲೀಸರು ಅರ್ಪಿತಾ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆಕೆ ಕೂಡ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಧನಂಜಯಗೆ ಪರಿಚಯಸ್ಥಳು. ಸ್ನೇಹಿತ ಕರೆದ ಕಾರಣಕ್ಕೆ ಆತನ ಫ್ಲ್ಯಾಟ್ಗೆ ಹೋಗಿದ್ದೆ. ಆತನೇ ಹಣ ಮತ್ತು ಚಿನ್ನ ಕೊಟ್ಟಿದ್ದಾನೆ. ನಾನು ಕಳವು ಮಾಡಿಲ್ಲ ಎಂದಿದ್ದಾಳೆ. ಕಳವು ಮಾಡಿರುವುದಾಗಿ ಧನಂಜಯ ದೂರು ಕೊಟ್ಟಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.