ಉಡುಪಿ; ಕಾಪು ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಜ್ಯೋತಿ (32)ಶನಿವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದರು. ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನು ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಆರೋಪದಡಿ ಕಾಪು ಪೊಲೀಸರು ಮಾ.30ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ರವಿಕುಮಾರ್(35) ಬಂಧಿತ ಆರೋಪಿ.
ಈತ ಕೆಎಸ್ಆರ್ಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2017ರಲ್ಲಿ ತನ್ನದೇ ಊರಿನ ಜ್ಯೋತಿಯನ್ನು ಮದುವೆಯಾಗಿದ್ದ. ಜ್ಯೋತಿ ಕಾಪು ಠಾಣೆ ಸಿಬ್ಬಂದಿಯಾಗಿರುವುದರಿಂದ ಇವರಿಬ್ಬರು ಠಾಣೆಯ ಸಮೀಪದಲ್ಲೇ ಇರುವ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು. ಮಾ. 29ರಂದು ರಾತ್ರಿ ಇವರಿಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಇದೇ ವಿಚಾರದಲ್ಲಿ ನೊಂದುಕೊಂಡು ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಯ ಕಹಿ ಸತ್ಯ ಬಿಚ್ಚಿಟ್ಟ ಡೈರಿ
ಜ್ಯೋತಿ ರೂಮಿನಲ್ಲಿ ಡೈರಿಯೊಂದು ಲಭಿಸಿದೆ. ಅದರಲ್ಲಿ ನನ್ನ ಸಾವಿಗೆ ಪತಿಯ ಅನುಮಾನವೇ ಕಾರಣ ಎಂದು ಉಲ್ಲೇಖಿಸಲಾಗಿದೆ. ಇತರ ಕಾರಣಗಳೂ ಡೈರಿಯಲ್ಲಿದ್ದು, ಆ ವಿವರಗಳನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಅವರ ತಾಯಿ ದೇವಮ್ಮ ವಿಟ್ಲಾಪುರ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.