ಲಕ್ನೋ: ಪತಿ ಚಪ್ಪಲಿ ಕೊಡಿಸಲಿಲ್ಲ ಅಂತಾ ಕೋಪಗೊಂಡ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗುವನ್ನ ನದಿಗೆ ಎಸೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ.
ಬಾಂದಾ ಜಿಲ್ಲೆಯ ಗಂಛಾ ಗ್ರಾಮದ ಪಪ್ಪು ನಿಷಾದ್ ಮತ್ತು ರನ್ನೋ ನಡುವೆ ಸದಾ ಜಗಳ ನಡೆಯುತ್ತಿತ್ತು. ಶನಿವಾರ ಪಪ್ಪು ಪತ್ನಿಗೆ ಚಪ್ಪಲಿ ಕೊಡಿಸಲು ಹಿಂದೇಟು ಹಾಕಿದ್ದಾನೆ. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳ ಆಗಿದೆ. ಕೆಲವೇ ದಿನಗಳಲ್ಲಿ ಹಣ ನೀಡೋದಾಗಿ ಪತಿ ಹೇಳಿದ್ದಾನೆ.
ಇನ್ನು ಶನಿವಾರ ಮಗು ಕಾಣದಿದ್ದಾಗ ಕುಟುಂಬಸ್ಥರು ಆತಂಕಗೊಂಡು ರನ್ನೋಳನ್ನ ವಿಚಾರಿಸಿದ್ದಾರೆ. ಆರಂಭದಲ್ಲಿ ತನಗೆ ಏನು ತಿಳಿಯದಂತೆ ನಾಟಕ ಮಾಡಿದ್ದಾಳೆ. ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಗು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರನ್ನೋಳನ್ನ ವಿಚಾರಣೆಗೆ ಒಳಪಡಿಸಿದಾಗ ಮಗುವನ್ನ ಕೇನ್ ನದಿಯಲ್ಲಿ ಎಸೆದಿರೋದಾಗಿ ಹೇಳಿದ್ದಾಳೆ.
ಪೊಲೀಸರು ನದಿಗೆ ತೆರಳಿ ಸ್ಥಳೀಯ ಮೀನುಗಾರರು ಮತ್ತು ಗ್ರಾಮಸ್ಥರ ಸಹಾಯದೊಂದಿಗೆ ಮಗುವಿಗಾಗಿ ಶೋಧ ನಡೆಸಿದ್ದಾರೆ. ಕೆಲ ಗಂಟೆ ಬಳಿಕ ಮಗುವಿನ ಮೃತದೇಹ ಪತ್ತೆಯಾಗಿದೆ. ಆದ್ರೆ ರನ್ನೋ ಮಗುವನ್ನ ಎಷ್ಟೊತ್ತಿಗೆ ನದಿಗೆ ಎಸೆದಿರುವ ಬಗ್ಗೆ ಹೇಳದೇ ಮೌನವಾಗಿದ್ದಾಳೆ. ಪ್ರಕರಣಂ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ.