ನೆಲ್ಯಾಡಿ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ದಿಢೀರ್ ಬ್ರೇಕ್ ಹಾಕಿದ್ದರಿಂದ ಸೀಟಿನಿಂದ ಕೆಳಗೆ ಬಿದ್ದು ಸೊಂಟಕ್ಕೆ ಏಟಾಗಿದೆ ಎಂದು ಚಾಲಕ ವಿರುದ್ಧ ಮಹಿಳೆಯೊಬ್ಬರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಕಲೇಶಪುರ ತಾಲೂಕಿನ ಚಂಪಕ ನಗರ ಗ್ರಾಮದ ಟೋಲ್ಗೋಟ್ ಬಳಿ ನಿವಾಸಿ ಕುಂಜು ಎಂಬವರ ಪತ್ನಿ ಅನಿತಾ(38ವ.)ದೂರುದಾರರಾಗಿದ್ದು ಅವರ ಅತ್ತೆ ಪಾಪತಿಯಮ್ಮ ಬಸ್ಸಿನ ಸೀಟಿನಿಂದ ಕೆಳಕ್ಕೆ ಬಿದ್ದು ಸೊಂಟಕ್ಕೆ ಏಟಾಗಿ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನಿತಾರವರು ತನ್ನ ಮಗಳನ್ನು ಮಂಗಳೂರಿನ ಶಾಲೆಯೊಂದಕ್ಕೆ ಸೇರಿಸುವ ಸಲುವಾಗಿ ಶಾಲೆಯಲ್ಲಿ ಕೇಳಿಕೊಂಡು ಬರಲೆಂದು ಅತ್ತೆ ಪಾಪತಿಯಮ್ಮ ಹಾಗೂ ನಾದಿನಿ ಸುಮಿತ್ರರೊಂದಿಗೆ ಎ.21ರಂದು ಬೆಳಿಗ್ಗೆ 6.30ಕ್ಕೆ ಸಕಲೇಶಪುರದಿಂದ ಕೆ.ಎಸ್.ಆರ್.ಟಿಸಿ ಬಸ್ಸು ನಂಬ್ರ ಕೆಎ 18 ಎಫ್ 1051ರಲ್ಲಿ ಮಂಗಳೂರಿಗೆ ಬರುತ್ತಿದ್ದರು. ಇವರು ಬಸ್ಸಿನಲ್ಲಿ ಮುಂದೆ ಸೀಟು ಖಾಲಿ ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಬಸ್ಸು ನೆಲ್ಯಾಡಿಗೆ ತಲುಪುತ್ತಿದ್ದಂತೆ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಬಸ್ಸು ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಪಾಪತಿಯಮ್ಮರವರು ಸೀಟಿನಿಂದ ಕೆಳಗೆ ಬಿದ್ದ ಪರಿಣಾಮ ಅವರ ಸೊಂಟಕ್ಕೆ ಏಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ನೆಲ್ಯಾಡಿಯಲ್ಲಿ ಇಳಿದು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ತೋರಿಸಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ವಾಪಾಸು ಊರಿಗೆ ಹೋಗಿದ್ದರು.