ಕಲಬುರಗಿ: ಕಳ್ಳರು ಏನೆಲ್ಲಾ ಕದಿಯುತ್ತಾರೆ ಅಂತಾ ಹೇಳೋಕೆ ಸಾಧ್ಯ ಇಲ್ಲ ಅನ್ನೋ ಘಟನೆಗಳನ್ನು ನಾವು ಪ್ರತಿದಿನ ಗಮನಿಸುತ್ತಲೇ ಇರುತ್ತೇವೆ. ಅಂತಹದ್ದೇ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ.
ಇಲ್ಲಿನ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ ಆರ್ ಟಿಸಿ ಬಸ್ಸನ್ನೇ ಇಂದು ಬೆಳಗ್ಗಿನ ಜಾವ 3-30ಕ್ಕೆ ಕಳ್ಳರು ಕಳ್ಳತನ ಮಾಡಿದ್ದರು.ನಕಲಿ ಕೀ ಬಳಸಿ ಬಸ್ ಎಗರಿಸಿದ್ದರು. ಇದೀಗ ಕಳ್ಳತನ ಮಾಡಲಾಗಿದ್ದ ಬಸ್ ಅನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ತೆಲಂಗಾಣದ ತಾಂಡೂರು ತಾಲೂಕಿನ ಭೂಕೈಲಾಸ ಎಂಬಲ್ಲಿ ಕಳ್ಳರು ಬಸ್ ಬಿಟ್ಟು ಪರಾರಿಯಾಗಿದ್ದಾರೆ.ಚಿಂಚೋಳಿ ಪಿಎಸ್ಐ ಮಹೆಬೂಬ್ ಅಲಿ ಹಾಗೂ ಮರ್ಲಿಂಗ ಸ್ಥಳಕ್ಕೆ ಹೋಗಿ ಬಸ್ ವಶಕ್ಕೆ ಪಡೆದಿದ್ದಾರೆ.
ಬೀದರ್ ಬಸ್ ಡಿಪೋ ನಂಬರ್ 2ಕ್ಕೆ ಸೇರಿದ KA38F 971 ಸಂಖ್ಯೆಯ ಸರ್ಕಾರಿ ಬಸ್ ಇದಾಗಿದೆ. ಈ ಬಸ್ ಚಿಂಚೋಳಿಯಿಂದ ಕಲಬುರಗಿ ಮಾರ್ಗವಾಗಿ ಬಳ್ಳಾರಿಗೆ ಚಲಿಸುತ್ತಿತ್ತು ಎನ್ನಲಾಗಿದೆ. ಕಳುವಾಗಿದ್ದ ಬಸ್ ಬಸ್ ಹುಡುಕಾಟಕ್ಕಾಗಿ ಪೋಲಿಸರ ಎರಡು ತಂಡಗಳು ತೆಲಂಗಾಣಕ್ಕೆ ತೆರಳಿವೆ. ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.