ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಪತ್ರ ಬರೆದಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೆಆರ್ ಎಸ್ ಪಕ್ಷದ ವತಿಯಿಂದ ಆಗಸ್ಟ್ 26 ರಿಂದ ಬೆಳ್ತಂಗಡಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಶನಿವಾರ ಪಾದಯಾತ್ರೆ ಧರ್ಮಸ್ಥಳ ತಲುಪಲಿದ್ದು ಅಂದು ಪಾದಯಾತ್ರಿಗಳು ಮಂಜುನಾಥನ ದರ್ಶನ ಪಡೆದು ಈ ಹೋರಾಟಕ್ಕೆ ಆತನ ಅನುಗ್ರಹವನ್ನು ಬೇಡಲಿದ್ದು ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ತಾವೂ ಸಹ ಈ ಹೋರಾಟಕ್ಕೆ ಯಶಸ್ಸು ಸಿಗಲೆಂದು ರಾಜ್ಯದ ಜನತೆಯ ಪರವಾಗಿ ಮಂಜುನಾಥನಲ್ಲಿ ಪ್ರಾರ್ಥಿಸಬೇಕೆಂದು ರವಿಕೃಷ್ಣಾರೆಡ್ಡಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೇ ಇದೇ ವೇಳೆ ಕೆಆರ್ ಎಸ್ ಪಕ್ಷದ ಮುಖಂಡರ ನಿಯೋಗಕ್ಕೆ ತಮ್ಮ ಭೇಟಿಗೆ ಸಮಯಾವಕಾಶ ಕೊಡಬೇಕು ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿಗೆ ಮತ್ತು ಭಾರತ ಸರ್ಕಾರದ ಪ್ರಧಾನಮಂತ್ರಿಗೆ ಪತ್ರ ಬರೆದು ಸೂಕ್ತ ಕ್ರಮಗಳಿಗೆ ಆಗ್ರಹಿಸಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.