ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಬಲ್ಲಿ ನವೀಕೃತ ಮಸೀದಿಯ ಉದ್ಘಾಟನೆಗೆ ಪಕ್ಕದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪ್ರಭಾರ ಮುಖ್ಯ ಶಿಕ್ಷಕ ದಿನೇಶ್ ರವರಿಗೆ ಕಡ್ಡಾಯ ರಜೆ ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ
ಹಾಗೆಯೆ ಘಟನೆಯ ಬಗ್ಗೆ ಸಮಗ್ರವಾದ ತನಿಖೆ ನಡೆಸಲು ಜಿಲ್ಲಾ ಉಪಯೋಜನಾಧಿಕಾರಿ ಮಂಜುಳಾ ಅವರನ್ನು ನೇಮಿಸಿದೆ.
ಕೊಕ್ಕಡದಲ್ಲಿ ನವೀಕರಣಗೊಂಡ ನೂತನ ಮಸೀದಿಯ ಉದ್ಘಾಟನೆ ಮಾರ್ಚ್ 20 ರಂದು ನಡೆದಿತ್ತು. ಉದ್ಘಾಟನಾ ಸಮಾರಂಭದ ಆಮಂತ್ರಣವನ್ನು ಮಸೀದಿ ಆಡಳಿತ ಮಂಡಳಿಯವರು ಶಾಲೆಯವರಿಗೂ ನೀಡಿದ್ದರು. ಮುಖ್ಯ ಶಿಕ್ಷಕರು ಮಸೀದಿಯವರ ಆಮಂತ್ರಣ ಸ್ವೀಕರಿಸಿ ಸರಕಾರಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಮಸೀದಿಗೆ ಹೋಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಜರಂಗದಳ ಹಾಗೂ ಕೆಲ ಸಂಘಟನೆಯವರು ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿಯವರು ನೀಡಿದ ಮಾಹಿತಿಯಂತೆ ಶಾಲಾ ನಿಯಮಗಳನ್ನು ಮೀರಿ ಮಕ್ಕಳನ್ನು ಖಾಸಗಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಹಾಗೂ ಅವರನ್ನು 10 ದಿನಗಳ ಕಡ್ಡಾಯ ರಜೆಯಲ್ಲಿ ತೆರಳುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.