ಕೊಡಗಿನ ದಲಿತ ಸಂಘರ್ಷ ಸಮಿತಿಯು (ದಸಂಸ) ಮೊಸರು, ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ 5% ಜಿಎಸ್ಟಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದೆ.
ದಸಂಸ ಕಾರ್ಯಕರ್ತರು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರಕ್ಕೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್ ಪ್ರಶಾಂತ್ ಅವರಿಗೆ ಸಲ್ಲಿಸಿದ್ದಾರೆ. ದಸಂಸ ಜಿಲ್ಲಾ ಸಂಚಾಲಕ ಹೆಚ್.ಆರ್ ಪರಶುರಾಮ್, ಮೊಸರು, ಮಜ್ಜಿಗೆ, ಪನ್ನೀರು, ಅಕ್ಕಿ, ಗೋದಿ, ಬಾರ್ಲಿ, ಓಟ್ಸ್, ,ಬೆಲ್ಲ ಜೇನುತುಪ್ಪ, ಆಸ್ಪತ್ರೆ ಕೊಠಡಿ ಶುಲ್ಕ, ಹೋಟೆಲ್ ಕೊಠಡಿ, ಎಲ್ಇ ಡಿ ಬಲ್ಬ್, ಬ್ಯಾಂಕ್ ಚೆಕ್ ಬುಕ್ಗಳು, ಹಣ್ಣು, ತರಕಾರಿ, ವಿದ್ಯಾರ್ಥಿಗಳು ಬಳಸುವ ಇಂಕ್, ಮುದ್ರಣದ ಇಂಕು, ಶಿಕ್ಷಣಕ್ಕಾಗಿ ಮಕ್ಕಳು ಬಳಸುವ ಭೂಪಟ ಹೀಗೆ ಹಲವು ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಿರುವುದು ಜನ ಸಾಮಾನ್ಯನ ಬದುಕಿನ ಮೇಲೆ ಬರೆ ಹಾಕಿದಂತಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಜಿಎಸ್ಟಿ ಹೆಸರಿನಲ್ಲಿ ಸರ್ಕಾರ ಜನ ಸಾಮಾನ್ಯರನ್ನು ಲೂಟಿ ಮಾಡುತ್ತಿದೆ. ಆಹಾರ ಪದಾರ್ಥಗಳು, ಅಗತ್ಯ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್ಟಿ ಹೇರಿರುವುದು ದುರಾದೃಷ್ಟಕರ ಸಂಗತಿ. ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದು ಬಿಜೆಪಿ ಸರ್ವಾಧಿಕಾರಿ ಧೋರಣೆಯೊಂದಿಗೆ ಜನ ವಿರೋಧಿ ನೀತಿಗಳನ್ನು ರೂಪಿಸುತ್ತಿದೆ. ಜನರ ಹೊಟ್ಟೆ ಮೇಲೆ ಬರೆ ಹಾಕುವ ಕೆಲಸಕ್ಕೆ ಮುಂದಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಆದಿವಾಸಿಗಳು, ದಲಿತರು, ಯಳವ ಸಮುದಾಯ ಹೆಚ್ಚಿನ ಜನರು ಕಾಫಿ ತೋಟಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಕೊಡಗಿನಲ್ಲಿರುವ ಬಹುಸಂಖ್ಯಾತ ಬಡಜನರು ‘ಸಾಲು ಮನೆ’ಗಳಲ್ಲಿ ಜೀತ ಮಾಡುತ್ತಿದ್ದಾರೆ. ಸಿಗುವ ದುಡಿಮೆಯಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿದೆ. ಹೀಗಾಗಿರುವಾಗ ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿ ವಿಧಿಸಿದರೆ, ಅವರೆಲ್ಲರೂ ಬದುಕುವುದಾದರೂ ಹೇಗೆ? ಎಂದು ದಸಂಸ ಹಿರಿಯ ಮುಖಂಡ ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಬಡವ, ದಲಿತ, ಶೋಷಿತ ಸಮುದಾಯಗಳ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ರಜನಿಕಾಂತ್, ಹೆಚ್ ಇ ಶಿವಕುಮಾರ್, ಸುಬ್ರಮಣಿ, ಗಿರೀಶ್, ಸತೀಶ್, ಕುಮಾರ್ ಮಹಾದೇವ, ಟಿ ಏನ್ ಗೋವಿಂದಪ್ಪ, ಹೆಚ್ ಆರ್ ಮುರುಗ, ಮರಿಸ್ವಾಮಿ, ರಂಗರಾಜು, ಮಂಜು ಸೇರಿದಂತೆ ಹಲವರಿದ್ದರು.