
ಕೆನಡಾದ ಸಾಸ್ಕಾಚೆವಾನ್ ಪ್ರಾಂತ್ಯದ ಯುರೇನಿಯಂ ಪರಿಶೋಧನಾ ಸ್ಥಳದಲ್ಲಿ ಕರಡಿ ದಾಳಿಗೆ ಒಳಗಾಗಿ ಭಾರತದ ಕೇರಳ ಮೂಲದ 27 ವರ್ಷದ ಯುವಕ ಹೃಷಿಕೇಶ್ ಕೊಲೋತ್ ಎಂಬುವವರು ಸಾವನ್ನಪ್ಪಿದ್ದಾರೆ.
ಯುಎಫ್ಸಿ (UFC) ಫೈಟರ್ ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಇವರು, ಅದಕ್ಕೆ ಬೇಕಾದ ಸಿದ್ಧತೆಗಳೊಂದಿಗೆ ಮೂರು ವರ್ಷಗಳ ಹಿಂದೆ ಕೆನಡಾಗೆ ತೆರಳಿದ್ದರು. ಸಸ್ಕಾಟೂನ್ನಿಂದ ಈಶಾನ್ಯಕ್ಕೆ ಸುಮಾರು 850 ಕಿಲೋಮೀಟರ್ ದೂರದಲ್ಲಿರುವ ನಾರ್ಡ್ಬೈ ಸರೋವರದ ಬಳಿ, ವ್ಯಾಂಕೋವರ್ ಮೂಲದ ‘ಯುರೇನಿಯಂಎಕ್ಸ್ ಡಿಸ್ಕವರಿ ಕಾರ್ಪ್’ ನಿರ್ವಹಿಸುತ್ತಿದ್ದ ‘ಝೂ ಬೇ’ಯಲ್ಲಿ ಹೃಷಿಕೇಶ್ ಅವರು ಗುತ್ತಿಗೆ ಆಧಾರದ ಮೇಲೆ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದರು. ಅವರು ಕಾರ್ಯನಿರತರಾಗಿದ್ದ ವೇಳೆಯೇ ಈ ದುರಂತ ಸಂಭವಿಸಿದೆ.
ದಾಳಿಯ ಬೆನ್ನಲ್ಲೇ ಸ್ಥಳದಲ್ಲಿದ್ದ ಸಹೋದ್ಯೋಗಿಯೊಬ್ಬರು ಆ ಕರಡಿಯನ್ನು ಗುಂಡಿಕ್ಕಿ ಕೊಂದಿದ್ದು, ಕರಡಿಯ ದೇಹದ ಸ್ಥಿತಿ, ಆರೋಗ್ಯ ಹಾಗೂ ದಾಳಿಗೆ ನಿಖರ ಕಾರಣವನ್ನು ಪತ್ತೆಹಚ್ಚಲು ಸಸ್ಕಟೂನ್ನ ‘ವೆಸ್ಟರ್ನ್ ಕಾಲೇಜ್ ಆಫ್ ವೆಟರ್ನರಿ ಮೆಡಿಸಿನ್’ನಲ್ಲಿ ಸದ್ಯ ಮರಣೊತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


