ಬೆಂಗಳೂರು; ಕರ್ನಾಟಕ ವಿಧಾನಪರಿಷತ್ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ ಇಂದು ಅಂತಾ ಹೇಳಬಹುದು. ಅಂತಹ ಘಟನೆಯೊಂದು ನಡೆದು ಹೋಗಿದೆ. ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಸೇರಿದಂತೆ ಕೆಲ ವಿಷಯಗಳ ಮಂಡನೆಗಾಗಿ ಇಂದು ವಿಧಾನ ಪರಿಷತ್ ವಿಶೇಷ ಅಧಿವೇಶನ ಕರೆಯಲಾಗಿತ್ತು. ಆದ್ರೆ ಕಲಾಪ ಆರಂಭವಾಗುತ್ತಿದಂತೆ ಪರಿಷತ್ ಅಧ್ಯಕ್ಷರ ಸ್ಥಾನದಲ್ಲಿ ಉಪಸಭಾಪತಿ ಧರ್ಮೇಗೌಡ ಅವರು ಬಂದು ಕುಳಿತರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಅವರನ್ನು ಕುರ್ಚಿಯಿಂದ ಎಳೆದು ತಂದರು. ಕೂಡಲೇ ಮಧ್ಯ ಪ್ರವೇಶ ಮಾಡಿದ ಬಿಜೆಪಿ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಕೈಕೈ ಮೀಲಾಯಿಸಿದರು. ಈ ಗದ್ದಲದಲ್ಲಿ ಸಭಾಪತಿ ಪೀಠದ ಬಳಿ ಹಾಕಿದ್ದ ಗ್ಲಾಸ್ ಅನ್ನು ಸದಸ್ಯರು ಕಿತ್ತು ಎಸೆದರು.
ಸದಸ್ಯರ ನಡುವೆ ಗಲಾಟೆ ಆರಂಭವಾಗುತ್ತದಂತೆ ಮಾರ್ಷಲ್ಗಳು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಈ ವೇಳೆ ಬಿಜೆಪಿ ಸದಸ್ಯರು ಸಭಾಪತಿ ಅವರ ಕೊಠಡಿಗೆ ಬೀಗ ಹಾಕಿದರು. ಸದನದಲ್ಲಿ ನಡೆದ ತಳ್ಳಾಟದಲ್ಲಿ ಎಂಎಲ್ಸಿ ನಾರಾಯಣಸ್ವಾಮಿ ಅವರು ಕೇಳಗೆ ಬಿದ್ದರು. ಈ ವೇಳೆ ಆಕ್ರೋಶ ಹೊರ ಹಾಕಿದ ಬಿಜೆಪಿ ಸದಸ್ಯರು ಬಲ ಪ್ರಯೋಗದಿಂದ ಸಭಾಪತಿ ಸ್ಥಾನವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಘೋಷಣೆ ಕೂಗಿದರು. ಇದರ ನಡುವೆ ಪೀಠದ ಬಳಿ ಆಗಮಿಸಿ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.