ಕಣಿಯೂರು: ಬೆಳ್ತಂಗಡಿ ತಾಲೂಕಿನ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ, ಕರಾಯ ನಿವಾಸಿ ಲೀಲಾವತಿ (52)ಯವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಇವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದರು. ಕಳೆದ 23 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು 1997ರಲ್ಲಿ ಕುಪ್ಪೆಟ್ಟಿ ಸರಕಾರಿ ಶಾಲೆಯಲ್ಲಿ ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ಅಲ್ಲಿ 15 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ನಂತರ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡರು. ಇವರು ಪ್ರಭಾರ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಿಲಿಗೂಡು ಸರಕಾರಿ ಶಾಲೆಗೆ 2013ರಲ್ಲಿ ಉತ್ತಮ ಶಾಲೆ ಎನ್ನುವ ಪ್ರಶಸ್ತಿಯೂ ಲಭಿಸಿತ್ತು.
ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ, ತಾಲೂಕು ಪಂಚಾಯತ್ ಸದಸ್ಯ ಶಾಹುಲ್ ಹಮೀದ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನ ಶೈಲೇಶ್ ಕುಮಾರ್, ಯುವಘಟಕದ ಅಭಿನಂದನ್ ಹರೀಶ್ ಕುಮಾರ್ ಮತ್ತು ವಿವಿಧ ಪಕ್ಷದ ನಾಯಕರು ಮೃತ ಲೀಲಾವತಿಯವರ ಅಂತಿಮ ದರ್ಶನ ಪಡೆದರು. ಮೃತರು ಪತಿ ಡೀಕಯ್ಯ ಬಂಗೇರ , ಮೂವರು ಪುತ್ರರಾದ ಚೇತನ್, ಚರಣ್ ಮತ್ತು ಚೈತನ್ಯ ಹಾಗೂ ಅಪಾರ ಸಂಖ್ಯೆಯ ಶಿಷ್ಯವರ್ಗ, ಬಂಧುವರ್ಗದವರನ್ನು ಅಗಲಿದ್ದಾರೆ.