ಕಾಪು : ಗ್ರಾಮೀಣ ಭಾಗದಲ್ಲಿ ಆಧುನಿಕ ಸೌಕರ್ಯಗಳಿಲ್ಲದೇ ಕೊರಗುತ್ತಿರುವ ಕನ್ನಡ ಮಾಧ್ಯಮ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನಿಂದ ಹಳ್ಳಿಗೆ ಬಂದು ಸೇವಾ ಕಾರ್ಯ ನಡೆಸುತ್ತಿರುವ ಪದವಿ ವಿದ್ಯಾರ್ಥಿಗಳ ಸೇವಾ ಕಾರ್ಯವು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ಅದೃಷ್ಯ ತಂಡದ ಸದಸ್ಯರು ಶತಮಾನ ಪೂರೈಸಿರುವ ಮಜೂರು ಗ್ರಾಮದ ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ, ಬಣ್ಣ ಬಳಿದು, ಶಾಲಾ ಗೋಡೆ, ತರಗತಿ ಕೋಣೆ ಮತ್ತು ಆವರಣ ಗೋಡೆಯಲ್ಲಿ ಚಿತ್ತಾಕರ್ಷಕವಾದ ವರ್ಣ ಚಿತ್ರ ಮತ್ತು ರೇಖಾ ಚಿತ್ರಗಳ ಸಹಿತವಾಗಿ ಕಲಿಕೆಗೆ ಪೂರಕವಾಗುವ ಚಿತ್ರಗಳನ್ನು ಬಿಡಿಸುವ ಮೂಲಕ ಜನರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳ ಚಿತ್ರಗಳನ್ನು ಬಿಡಿಸಿದ್ದು ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬುವ ನುಡಿಮುತ್ತುಗಳು, ಭರತನಾಟ್ಯ, ಕಥಕ್, ಯಕ್ಷಗಾನ ಸಹಿತವಾದ ವಿವಿಧ ನೃತ್ಯ ಪ್ರಾಕಾರಗಳು, ,ರಾಜ್ಯ ಜಿಲ್ಲೆಯ ಬಗ್ಗೆ ಮಾಹಿತಿ ನೀಡುವ ನಕ್ಷೆಗಳು, ವರ್ಲಿ ಆರ್ಟ್, ಇತ್ಯಾದಿಗಳು ವಿದ್ಯಾರ್ಥಿ ಗಳ ಕೈ ಕೈಚಳಕದಿಂದ ಮೂಡಿಬಂದಿದೆ.
ಕಾಲೇಜು ಶಿಕ್ಷಣದ ಜೊತೆಗೆ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಗದಗ ಮೂಲದ ದೀಪಕ್ ಅವರ ಮಾರ್ಗದರ್ಶನದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ಮುಂಚೂಣಿಯ ಕಾರ್ಯಕರ್ತ ಮಧುಸೂದನ್ ಅವರ ನೇತೃತ್ವದಲ್ಲಿ ಅದೃಷ್ಯ ತಂಡದ ಸದಸ್ಯರು ನಡೆಸುತ್ತಿರುವ ಸೇವಾ ಕಾರ್ಯಕ್ಕೆ ಎನ್ ಫೇಸ್ ಮತ್ತು ಇಂಡಿಯಾ ಸುಧಾರ್ ಕಂಪೆನಿಗಳು ಪ್ರಾಯೋಜಕತ್ವ ವಹಿಸಿವೆ. ಪೈಂಟಿಂಗ್ ಸಹಿತವಾಗಿ ವಿವಿಧ ರೀತಿಯ ಸಹಕಾರವನ್ನು ಒದಗಿಸುತ್ತಿದ್ದು ಸೇವಾ ಕಾರ್ಯ ನಡೆಸುವ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ, ಸ್ಥಳೀಯರು ಪ್ರೋತ್ಸಾಹಿಸುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ಬಿಡುವಿನ ಸಮಯವನ್ನು ವ್ಯರ್ಥ ಮಾಡದೇ ಸಮಾಜಮುಖಿ ಚಿಂತನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ಈ ಕಾರ್ಯವನ್ನು ಮೆಚ್ಚಲೇಬೇಕು.