ಬಂಟ್ವಾಳ: ಕಲ್ಲಡ್ಕ ಸಮೀಪ ದಾಸಕೋಡಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತಕ್ಕೀಡಾದ ಕಣ್ಣೂರಿನ ಇಬ್ಬರು ಮುತಅಲ್ಲಿಮ್ (ಉಸ್ತಾದರು) ಮತ್ತು ಆರು ವರ್ಷದ ಮಗುವಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಿ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಸಂದೇಶ್ ಕಲ್ಲಡ್ಕ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಕಟ್ಟಡ ನಿರ್ಮಾಣ ಗುತ್ತಿಗೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಸಂದೇಶ್, ಮಂಗಳವಾರ ಬೆಳಗ್ಗೆ ತನ್ನ ಕೆಲಸಗಾರರೊಂದಿಗೆ ಕಾರಿನಲ್ಲಿ ನಿರ್ಮಾಣ ಕೆಲಸದತ್ತ ತೆರಳುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಇಬ್ಬರು ಪುರುಷರು ಮತ್ತು ಮಗು ಬಿದ್ದಿದ್ದನ್ನು ಕಂಡು ಕೂಡಲೇ ತಮ್ಮ ಕಾರಿನಲ್ಲಿ ಮೂವರನ್ನು ಸೋಮಾಯಾಜಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲು ನೆರವಾಗಿದ್ದಾರೆ.
ಜಾತಿ, ಧರ್ಮ ನೋಡದೆ, ಮಾನವೀಯತೆಯೇ ನಿಜವಾದ ಧರ್ಮ ಎಂದು ಸಾರಿದ ಕಲ್ಲಡ್ಕದ ಸಂದೇಶ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗೆ ಒಳಗಾಗಿದ್ದಾರೆ.ಅಪಘಾತ ನಡೆದ ಸ್ಥಳದಲ್ಲಿ ಮೊಬೈಲ್ ನಲ್ಲಿ ಫೊಟೊ ಕ್ಲಿಕ್ ಮಾಡುವವರು ಇದ್ದರೇ ಹೊರತು, ಯಾರೂ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿರಲಿಲ್ಲ. ತಲೆಯಿಂದ ರಕ್ತ ಒಸರುತ್ತಿದ್ದ ಕಾರಣ ತುರ್ತು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾಗಿ ಸಂದೇಶ್ ಹೇಳಿದ್ದಾರೆ.