ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರ್ಮಾಪಕ, ಫೈನಾನ್ಶಿಯರ್ ಹಾಗೂ ವಿತರಕ ಡಿ. ಕಮಲಾಕರ್ ಇಂದು ಕೊನೆಯುಸಿರೆಳೆದಿದ್ದಾರೆ. ಸಾಧು ಸ್ವಭಾವದ ವ್ಯಕ್ತಿ ಕಮಲಾಕರ್ ಕನ್ನಡದ ಸುಮಾರು 40 ಚಿತ್ರಗಳಿಗೆ ಫೈನಾನ್ಶಿಯರ್ ಆಗಿದ್ದಾರೆ.
ನಿರ್ಮಾಪಕ ಸೂರಪ್ಪ ಬಾಬು, ಆರ್.ಎಸ್. ಗೌಡ ಸೇರಿದಂತೆ ಅನೇಕ ನಿರ್ಮಾಪಕರು ಕಮಲಾಕರ್ ಅವರ ಸಹಾಯದಿಂದ ಮೇಲೆ ಬಂದವರು. ಕಮಲಾಕರ್ ಅವರು ಫೈನಾನ್ಶಿಯರ್ ಆಗಿ ತೊಡಗಿಕೊಂಡ ಸಿನಿಮಾಗಳ ಪಟ್ಟಿಗಳಲ್ಲಿ ಮಾನಸ ಸರೋವರ, ಸವತಿಯ ನೆರಳು, ಬಂಧು ಬಳಗ, ಸೂರಪ್ಪ, ಕೋಟಿಗೊಬ್ಬ, ಕದಂಬ, ಅಮ್ಮ, ಕರುಳಿನ ಕೂಗು ಹಾಗೂ ಇನ್ನಿತರ ಸಿನಿಮಾಗಳಿವೆ.
ತೆರೆದ ಹೃದಯದ ಶಸ್ತ್ರಚಿಕಿತ್ಸೆ ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಕಮಲಾಕರ್, 2015 ರಲ್ಲಿ ತಮ್ಮ ಪುತ್ರ ರಣಧೀರ್ ಅಭಿನಯದ ‘ಮುತ್ತಿನ ಪಲ್ಲಕ್ಕಿ’ ಚಿತ್ರಕ್ಕೆ ಫೈನಾನ್ಸ್ ಮಾಡುವ ಮೂಲಕ ಚಿತ್ರರಂಗಕ್ಕೆ ಮತ್ತೆ ವಾಪಸ್ ಬಂದರು.
ಎಂ.ಡಿ. ಕೌಶಿಕ್ ನಿರ್ಮಾಣದ ‘ಮುತ್ತಿನ ಪಲ್ಲಕ್ಕಿ’ ಚಿತ್ರಕ್ಕೆ ಆಗ ತಾನೇ ಬಂದಿದ್ದ ಡ್ರೋನ್ ಕ್ಯಾಮರಾ ತಂತ್ರಜ್ಞಾನವನ್ನು ಕಮಲಾಕರ್ ಪರಿಚಯಿಸಿದ್ದರು.