ಬೆಂಗಳೂರು : ನಿನ್ನೆ ಸಂಜೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತವಾಗಿದ್ದು, ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುವಂತಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಸುಧಾಕರ್, ತಾಂತ್ರಿಕ ಸಮಸ್ಯೆಯಿಂದ 108 ಆಂಬ್ಯುಲೆನ್ಸ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಾಫ್ಟ್ ವೇರ್ ಮದರ್ ಬೋಲ್ಡ್ ಹಾಳಾಗಿದ್ದರಿಂದ ಸಮಸ್ಯೆಯಾಗಿದೆ. 2008 ರಲ್ಲಿ ಸರ್ವಿಸ್ ನಲ್ಲಿ ಬಳಸಿ ಸಾಫ್ಟ್ ವೇರ್ ಗೆ ಹಾನಿಯಾಗಿದೆ. ಸಮಸ್ಯೆ ಸರಿಪಡಿಸಲು ಇನ್ನೂ 2-3 ದಿನಗಳು ಬೇಕಾಗುತ್ತದೆ. ಹಳೆಯ ಬೋರ್ಡ್ ಆಗಿರುವ ಕಾರಣ ಸದ್ಯಕ್ಕೆ ಉಪಕರಣ ಸಿಗುತ್ತಿಲ್ಲ. ಕಾಲ್ ಸೆಂಟರ್ ಕರೆಗಳನ್ನು ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ರೋಗಿಗಳ ಸಂಬಂಧಿಕರ ಫೋನ್ ಕರೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹಲವೆಡೆ 108 ಆಂಬ್ಯುಲೆನ್ಸ್ ಗಳ ಸೇವೆಯಲ್ಲಿ ಸಮಸ್ಯೆ ಎದುರಾಗಿದೆ. ಕಳೆದ ಎರಡು ದಿನದಿಂದ 108 ಆಂಬ್ಯುಲೆನ್ಸ್ ಸೇವೆಗೆ ಎಷ್ಟೇ ಕರೆ ಮಾಡಿದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. 10 ಬಾರಿ ಕರೆ ಮಾಡಿದರೆ ಒಮ್ಮೆ ಕರೆ ಸ್ವೀಕರಿಸುತ್ತಾರೆ. ಇದರಿಂದ ತೀರ ಎಮರ್ಜೆನ್ಸಿ ಇರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.