ಬೆಳಗಾವಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವೇ ನನ್ನ ಸಹೋದರ ಸಂತೋಷ್ ಪಾಟೀಲ್ ಸಾವಿಗೆ ಕಾರಣ. ಶೇಕಡ 40 ರಷ್ಟು ಕಮಿಷನ್ ಕೇಳಿದ್ದರು. ಮಾನನಷ್ಟ ಮೊಕ್ಕದ್ದಮೆ ಕೂಡ ಹಾಕಿದ್ದರು. ಅವರ ಬಂಧನ ಆಗಲೇಬೇಕು. ಅಲ್ಲಿವರೆಗೂ ನನ್ನ ತಮ್ಮನ ಅಂತ್ಯಕ್ರಿಯೆ ಮಾಡೋದೇ ಇಲ್ಲ ಎಂದು ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆ.
ನನ್ನ ತಮ್ಮನ ಸಾವಿಗೆ ನ್ಯಾಯ ಸಿಗಲೇಬೇಕು. ಆತನಿಗೆ ಜೀವ ಬೆದರಿಕೆಯನ್ನೂ ಹಾಕಿದ್ದರು. ಆತ ಬೆಳಗಾವಿಯ ಸಮರ್ಥ ಕಾಲೋನಿಯಲ್ಲಿಯೇ ವಾಸವಾಗಿದ್ದರು. ಈತನಿಗೆ ಒಂದು ವರ್ಷದ ಮಗು ಕೂಡ ಇದೆ. ಮೊದಲೇ ಮಧ್ಯಮ ವರ್ಗದ ವ್ಯಕ್ತಿ. 4 ಕೋಟಿ ಸಾಲ ಮಾಡಿ ಕೆಲಸ ಮಾಡಿದ್ದನು ಎಂದು ಪ್ರಶಾಂತ್ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪ ಅವರನ್ನ ನನ್ನ ತಮ್ಮ ಅನೇಕ ಸಲ ಭೇಟಿ ಕೂಡ ಆಗಿದ್ದ. ನನ್ನ ಸಹೋದರನ ಸಾವಿಗೆ ನೇರವಾಗಿ ಈಶ್ವರಪ್ಪ ಅವರೇ ಕಾರಣ. ಇವರ ಬಂಧನ ಆಗೋವರೆಗೂ ತಮ್ಮನ ಅಂತ್ಯಕ್ರಿಯೆ ಮಾಡೋದೇ ಇಲ್ಲ ಎಂದು ಪ್ರಶಾಂತ್ ಪಾಟೀಲ್ ಹೇಳಿಕೆ ಕೊಟ್ಟಿದ್ದಾರೆ.