ಉಡುಪಿ: ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪಿತ್ತಬೈಲ್ ನಲ್ಲಿ ನಿನ್ನೆ ನಡೆದ ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ನಡೆದ ಸ್ಥಳಕ್ಕೆ ಇಂದು ಆಂತರಿಕ ಭಧ್ರತಾ ವಿಭಾಗದ ಡಿಐಜಿ ಡಿ. ರೂಪಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನವೆಂಬರ್ 10 ರಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದು ಎರಡೂ ಕಡೆ ಗುಂಡಿನ ಚಕಮಕಿ ನಡೆದು ಕಾರ್ಯಾಚರಣೆಯಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದಾನೆ ಎಂದು ಡಿಐಜಿ ರೂಪಾ ಸ್ಪಷ್ಟಪಡಿಸಿದ್ದಾರೆ.
ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಬೆಂಗಳೂರಿನಿಂದ 25 ಹಾಗೂ ಶಿವಮೊಗ್ಗದಿಂದ 25 ಸಿಬ್ಬಂದಿ ಪಾಲ್ಗೊಂಡಿದ್ದು, ಎಎನ್ ಎಫ್ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಮೃತ ನಕ್ಸಲ್ ವಿಕ್ರಂ ಗೌಡ ಕಬಿನಿ ದಳಂ 2ನೇ ತಂಡದ ನೇತೃತ್ವ ವಹಿಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಡೆಯಲಿದೆ. ಕಾರ್ಯಾಚರಣೆಯಲ್ಲಿ ಎನ್ ಕೌಂಟರ್ ಆಗಿರುವ ಬಗ್ಗೆ ವಿಕ್ರಂ ಗೌಡ ಕುಟುಂಬಕ್ಕೆ ಈಗಾಗಲೇ ಎಎನ್ ಎಫ್ ಪೊಲೀಸರು ಮಾಹಿತಿ ರವಾನಿಸಿದ್ದಾರೆ.
ಇದೇ ವೇಳೆ, ಎನ್ ಕೌಂಟರ್ ನಡೆದ ಸ್ಥಳದಲ್ಲಿ ಪೊಲೀಸರು
ಮಹಜರು ಪ್ರಕ್ರಿಯೆ ನಡೆಸಿದ್ದು, ಎಫ್ ಎಸ್ ಎಲ್ ತಂಡ ಹಾಗೂ
ಬೆರಳಚ್ಚು ತಜ್ಞರು ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
46 ವರ್ಷದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ ಕಾರ್ಕಳ ತಾಲೂಕಿನ ನಿವಾಸಿಯಾಗಿದ್ದ ವಿಕ್ರಂ ಗೌಡ ಮೇಲೆ ಕೇರಳದಲ್ಲಿನ 19 ಪ್ರಕರಣಗಳು ಸೇರಿ ಒಟ್ಟು 61 ಪ್ರಕರಣಗಳು ದಾಖಲಾಗಿದ್ದವು.
ಶರಣಾಗತಿಗೆ ನಕ್ಸಲರು ಬಗ್ಗದ ಕಾರಣ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದು, ಇ ನ್ನೂ ಐದಾರು ಜನ ನಕ್ಸಲರು ಇದ್ದು, ಪ್ರತಿಕ್ರಿಯೆಗೆ ಕಾದು ನೋಡುತ್ತೇವೆ ಎಂದು ಕಬ್ಬಿನಾಲೆಯಲ್ಲಿ ಐಎಸ್ ಡಿ ಡಿಐಜಿ ರೂಪಾ ತಿಳಿಸಿದ್ದಾರೆ.