ಬೆಳ್ತಂಗಡಿ: ತಾಲೂಕಿನ ಇಂದಬೆಟ್ಟು ಗ್ರಾಮದ ದೇರಾಜೆ ಎಂಬಲ್ಲಿನ ಮುಹಮ್ಮದ್ ಅವರ ಮನೆಯಿಂದ ಹಾಡಹಗಲೇ ಕಳವುಗೈಯ್ಯಲ್ಪಟ್ಟಿದ್ದ 40 ಪವನ್ ಚಿನ್ನ ಕಳವು ಪ್ರಕರಣದ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರ ತಂಡ ಹೆಡೆಮುರಿಕಟ್ಟಿದೆ.
ಬಂಧಿತರಿಂದ ಕಳವುಗೈದ ಆಭರಣಗಳು, ನಗದು, ಹಾಗೂ ಆಲ್ಟೋ ಕಾರು, ಒಂದು ಪಲ್ಸರ್ ಬೈಕ್ ಸಹಿತ ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್ಟ್ ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತರನ್ನು ನಾವೂರು ಗ್ರಾಮದ ನಿರಿಂದಿ ಮನೆ ನಿವಾಸಿ ಮುಹಮ್ಮದ್ ಸ್ವಾಲಿ(26), ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ಯಹ್ಯಾ(32), ಮತ್ತು ನಾವೂರು ಗ್ರಾಮದ ಕಿರ್ನಡ್ಕ ಮನೆಯ ಬಿ.ಹೆಚ್ ನೌಫಲ್(27) ಎಂಬವರೆಂದು ಗುರುತಿಸಲಾಗಿದೆ.
ಇವರಿಂದ ಘಟನೆ ನಡೆದ ದಿನ ಮನೆಯಿಂದ ಕಳವುಗೈದಿದ್ದ 12 ಲಕ್ಷ ರೂ.ಮೌಲ್ಯದ 40 ಪವನ್ ಚಿನ್ನಾಭರಣ, 5200 ರೂ ನಗದು ಇವುಗಳನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಮಾನ್ಯ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸೋನವನ ಋಷಿಕೇಶ್ ಭಗವಾನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಗುಣಾರೆಯವರ ನಿರ್ದೇಶನದಂತೆ, ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ್ ರವರ ಸೂಚನೆಯಂತೆ, ಈ ಪ್ರಕರಣದ ತನಿಖಾಧಿಕಾರಿಯಾದ ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ ಬಿ, ಬೆಳ್ತಂಗಡಿ ಪೊಲೀಸ್ ಠಾಣಾ ಪಿ.ಎಸ್.ಐ ನಂದಕುಮಾರ್, ಪ್ರೊ.ಪಿಎಸ್ಐ ಮೂರ್ತಿ, ಎಎಸೈ ದೇವಪ್ಪ ಎಂಕ, ಸಿಬ್ಬಂದಿಗಳಾದ ಲಾರೆನ್ಸ್ ರಾಜೇಶ್ ಎನ್, ವೃಷಭ, ಪ್ರಮೋದ್ ನಾಯ್ಕ , ಇಬ್ರಾಹಿಂ ಗರ್ಡಾಡಿ, ಲತೀಫ್, ವಿಜಯ ಕುಮಾರ್ ರೈ, ವೆಂಕಟೇಶ್, ಬಸವರಾಜ್, ಚರಣ್, ಅವಿನಾಶ್, ವಾಹನ ಚಾಲಕರಾದ ಮಹಮ್ಮದ್ ಆಸೀಫ್, ಸತೀಶ್, ತಾಂತ್ರಿಕ ಸಿಬ್ಬಂದಿಗಳಾದ ದಿವಾಕರ, ಸಂಪತ್ ಕುಮಾರ್ ಸಹಕರಿಸಿದ್ದಾರೆ.