ಬೆಳ್ತಂಗಡಿ : ದನವನ್ನು ವಧೆ ಮಾಡಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಮಂಜಲಪಲ್ಲೆ ಕುಕ್ಕಳ ಗ್ರಾಮದ ಅಟತ್ತೋಡಿ ನಿವಾಸಿ ಸುಂದರ ಮೂಲ್ಯ(59) ಎಂಬಾತನಾಗಿದ್ದು. ಈತನು ಪಿಕಪ್ ವಾಹನದಲ್ಲಿ ಸವಣಾಲು ಗ್ರಾಮದಿಂದ ಹಿಂಸಾತ್ಮಕ ರೀತಿಯಲ್ಲಿ ದನವನ್ನು ತುಂಬಿಕೊಂಡು ಮೇಲಂತಬೆಟ್ಟು ಕ್ರಾಸ್ ಬಳಿ ಬರುತ್ತಿದ್ದಾಗ ಗುರುವಾರ ಬೆಳಗ್ಗೆ 9:15 ರ ಸುಮಾರಿಗೆ ಬೆಳ್ತಂಗಡಿ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಯಾವುದೇ ಪರವಾನಿಗೆಯಿಲ್ಲದೆ ಒಂದು ದನ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಆರೋಪಿ ಸುಂದರ ಮೂಲ್ಯನನ್ನು ಬಂಧಿಸಿದ್ದಾರೆ. ಸಾಗಾಟ ಮಾಡುತ್ತಿದ್ದ ದನವನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ KA-19-B-4254 ಸಂಖ್ಯೆಯ ಪಿಕಪ್ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು ಇದರ ಒಟ್ಟು ಮೌಲ್ಯ 1,60,000 ಎಂದು ಅಂದಾಜಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಕೊಳ್ಳಲಾಗಿದೆ. ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ಮತ್ತು ಪಿಎಸ್ಐ ಅರ್ಜುನ್ ನೇತ್ರತ್ವದ ಪ್ರೋ ಪಿಎಸ್ಐ ಮುರುಳೀಧರ ನಾಯ್ಕ್ ಮತ್ತು ಸಿಬ್ಬಂದಿ ಮಾಲತೇಶ್, ನಾಗರಾಜ್, ಚರಣ್ ಭಾಗವಹಿಸಿದರು.