ಬೆಳ್ತಂಗಡಿ; ಮಾಜಿ ಶಾಸಕ ವಸಂತ ಬಂಗೇರ ನಿಧನ ಶಾಸಕ ಹರೀಶ್ ಪೂಂಜ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು ವಸಂತ ಬಂಗೇರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
ಹರೀಶ್ ಪೂಂಜ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಬರೆದಿದ್ದಾರೆ.
ಯಾನ್ ಉಲ್ಲೆ, ಈ ಬೇಲೆ ಮನ್ಪು ಮಾರಾಯ”, ಎಂಬ ಮಾತು ಕೊಟ್ಟರೆ ಅವರ ಹಿಂದೆ ಬಂಡೆಗಲ್ಲಾಗಿ ನಿಂತು ಕಾಪಾಡುವ ಗುಣ ನಮ್ಮ ತಾಲೂಕಿನ ಹಿರಿಯ ರಾಜಕೀಯ ಮುತ್ಸದ್ಧಿ ಶ್ರೀ ವಸಂತ ಬಂಗೇರ ಅವರದ್ದು. ಬಿಜೆಪಿ ದೇಶದಲ್ಲಿ ನೆಲೆ ನಿಲ್ಲುತ್ತಿರುವ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿದ ಎರಡು ಕಂಚಿನಕಂಠಗಳಲ್ಲಿ ಶ್ರೀಯುತರು ಒಬ್ಬರು.
ಕಾಲಾಂತರದಲ್ಲಿ ರಾಜಕೀಯವಾಗಿ ಬೇರೆ ಹಾದಿ ಹಿಡಿದರೂ, ತನ್ನ ಸ್ವಂತಿಕೆಯಿಂದ ಒಂದು ಚೂರು ಬದಲಾಗದೆ, ತನ್ನ ಸ್ವಸಾಮರ್ಥ್ಯದಿಂದ ಬೆಳ್ತಂಗಡಿಯ ರಾಜಕೀಯ ಚಿತ್ರಣದಲ್ಲಿ ತನ್ನ ಛಾಪು ಮೂಡಿಸಿದ ರಾಜಕಾರಣಿ. ಇಂಥಹ ಧೀಮಂತ ನಾಯಕನ ಅಗಲಿಕೆ ಬೆಳ್ತಂಗಡಿಯ ಜನತೆಯ ಪಾಲಿಗೆ ಅಪಾರ ನಷ್ಟ.
ನಿಮ್ಮ ಅಗಲಿಕೆ ತಾಲೂಕಿನ ರಾಜಕೀಯದಲ್ಲಿ ಶಾಶ್ವತ ಶೂನ್ಯವನ್ನು ಸೃಷ್ಟಿಮಾಡಿದೆ. ಅಗಲಿದ ತಮ್ಮ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಪಾದದಲ್ಲಿ ಪ್ರಾರ್ಥನೆ. ತಮ್ಮ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ತಮ್ಮ ಕುಟುಂಬ, ಬಂಧುವರ್ಗ ಹಾಗು ಅಭಿಮಾನಿವರ್ಗಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.