ಕಾಬೂಲ್: ತಾಲಿಬಾನ್ ವಶಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲಿರುವ 500ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲು ಭಾರತ ಸರ್ಕಾರವು ವಾಯುಪಡೆಯ ದೈತ್ಯ ಸಿ-17 ಗ್ಲೋಬ್ ಮಾಸ್ಟರ್ ವಿಮಾನವನ್ನು ಕಳುಹಿಸಿಕೊಟ್ಟಿದ್ದು, ವಿಮಾನವು ಸೋಮವಾರ ಸಂಜೆ ಕಾಬೂಲ್ನಲ್ಲಿ ಲ್ಯಾಂಡ್ ಆಗಿದೆ.
ವಿಮಾನ ನಿಲ್ದಾಣದ ಸಮೀಪಕ್ಕೆ ಬಂದಿರುವ 500ಕ್ಕೂ ಹೆಚ್ಚು ಭಾರತೀಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಸ್ವದೇಶಕ್ಕೆ ಏರ್ಲಿಫ್ಟ್ ಮಾಡಲಿದೆ.ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗೊಂದಲದ ವಾತಾವರಣ ಮುಂದುವರಿದಿದ್ದ ಕಾರಣ ಸೋಮವಾರ ಕಜಕಿಸ್ತಾನದಲ್ಲಿ ವಾಯುಸೇನೆಯ ವಿಮಾನ ಲ್ಯಾಂಡ್ ಆಗಿತ್ತು. ಅಮೆರಿಕದ ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡ ನಂತರ ಭಾರತದ ವಿಮಾನಕ್ಕೆ ಲ್ಯಾಂಡ್ ಆಗಲು ಅವಕಾಶ ಕಲ್ಪಿಸಲಾಯಿತು.
ಕಾಬೂಲ್ ನಗರದ ವಿವಿಧೆಡೆ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಿಮಾನ ನಿಲ್ದಾಣಕ್ಕೆ ತಲುಪಿಸಲೆಂದು ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ಚರ್ಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣದ ಭದ್ರತೆಗಾಗಿ ಅಮೆರಿಕ ಕನಿಷ್ಠ 6 ಸಾವಿರ ಯೋಧರನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ಹೇಳಾಲಾಗಿದೆ.


