ಗದಗ: 4 ವರ್ಷದ ಹಿಂದೆ ಹಿಂದು ಯುವತಿಯನ್ನು ಮದುವೆಯಾಗಿದ್ದ ಅನ್ಯ ಧರ್ಮದ ವ್ಯಕ್ತಿಯೊಬ್ಬ, ಈಗ ಆಕೆಯನ್ನ ನಡುರಸ್ತೆಯಲ್ಲೇ ಅಟ್ಟಾಡಿಸಿ 20ಕ್ಕೂ ಹೆಚ್ಚು ಬಾರಿ ಅಮಾನುಷವಾಗಿ ಮಚ್ಚಿನಿಂದ ಹೊಡೆದು ಕೊಲ್ಲಲು ಯತ್ನಿಸಿದ್ದಾನೆ. ಗಂಡನಿಂದ ಮಾರಣಾಂತಿಕ ಹಲ್ಲೆಗೊಳಗಾದ ಪತ್ನಿ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಇಂತಹ ದುರ್ಘಟನೆ ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದ್ದು, ಭೀಕರ ಹಲ್ಲೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಪೂರ್ವ ಶಿರೂರ(26) ಅಲಿಯಾಸ್ ಅರ್ಫಾನ್ ಬಾನು ಹಲ್ಲೆಗೊಳಗಾದ ಮಹಿಳೆ. ಈಕೆಯ ಗಂಡ ಇಜಾಜ್ (38) ಆರೋಪಿ, ಹಿಂದೂ ಯುವತಿ ಅಪೂರ್ವಳನ್ನು ಪ್ರೀತಿಸಿ ಹುಬ್ಬಳ್ಳಿ ಕೋಲಪೆಟೆಯ ನಿವಾಸಿ ಮುಸ್ಲಿಂ ಧರ್ಮದ ಇಜಾಜ್ 4 ವರ್ಷದ ಹಿಂದೆ ಮದುವೆಯಾಗಿದ್ದ. ಆದರೆ, ಈತನಿಗೆ ಈಗಾಗಲೇ ಬೇರೊಬ್ಬಳ ಜತೆ ಮದುವೆ ಆಗಿತ್ತು. ಆದರೂ ಈ ಸತ್ಯ ಮುಚ್ಚಿಟ್ಟು ಅಪೂರ್ವಳನ್ನು ಮದುವೆ ಆಗಿದ್ದ.
ಮದುವೆಯಾದ ಬಳಿಕ ಅಪೂರ್ವಗೆ ಅರ್ಫಾನ್ ಬಾನು ಎಂಬ ಹೆಸರನ್ನೂ ಇಟ್ಟಿದ್ದ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ದಂಪತಿ ನಡುವೆ ಕೌಟುಂಬಿಕ ಕಲಹ ಶುರುವಾಗಿತ್ತು. ಇಜಾಜ್ನಿಂದ ಮೋಸ ಹೋಗಿರುವ ವಿಚಾರ ಹಾಗೂ ಈತನಿಗೆ ತಾನು 2ನೇ ಪತ್ನಿ ಎಂಬ ಸತ್ಯ ತಿಳಿದ ಅಪೂರ್ವ ಗಂಡನಿಂದ ದೂರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು.
ನಾಲೈದು ತಿಂಗಳಿಂದ ಗಂಡನಿಂದ ದೂರವಾಗಿದ್ದ ಅಪೂರ್ವ, ಗುರುವಾರ ಬೆಳಗ್ಗೆ ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗೌಂಡ್ನಲ್ಲಿ ದ್ವಿಚಕ್ರ ವಾಹನ ಚಾಲನೆಯ ಮಾಡುವುದನ್ನ ಕಲಿಯುತ್ತಿದ್ದಳು. ಅಲ್ಲಿಗೆ ಮಚ್ಚು ಹಿಡಿದು ಬಂದ ಇಜಾಜ್, ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆಕೆಯನ್ನು ಕೂಡಲೇ ಸ್ಥಳೀಯರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಎಸ್ ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.