ಬೆಳ್ತಂಗಡಿ : ಅಪರಿಚಿತ ಸುಮಾರು 50 ವರ್ಷದ ಮಾತು ಬಾರದ ವೃದ್ಧೆ ಸೆಪ್ಟೆಂಬರ್ 18 ರಂದು ಗೇರುಕಟ್ಟೆ ರಸ್ತೆಯ ಬದಿಯಲ್ಲಿ ಅಸ್ವಸ್ಥಗೊಂಡು ಕುಳಿತ್ತಿದ್ದ ಬಗ್ಗೆ ಮಾಹಿತಿ ಪಡೆದ ಪಿಡಿಓ ಮತ್ತು ಸ್ಥಳೀಯರು ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಅಸ್ವಸ್ಥಗೊಂಡು ಅಪರಿಚಿತ ವೃದ್ಧೆಯೊಬ್ಬರು ಕುಳಿತಿದ್ದರು . ಅವರನ್ನು ಸ್ಥಳೀಯ ವ್ಯಕ್ತಿ ಇಬ್ರಾಹಿಂ ಶಾಫಿ ಗೇರುಕಟ್ಟೆ ಮತ್ತು ಅವರ ಸ್ನೇಹಿತರು ಗಮನಿಸಿ, ಸ್ಥಳಕ್ಕೆ ಹೋಗಿ ವಿಚಾರಿಸಿದಾಗ ಅವರಿಗೆ ಮಾತು ಬಾರದೆ ಇರುವುದು ತಿಳಿದು ಬಂದಿದೆ.
ನಂತರ ಕಳಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಓ) ಸಂತೋಷ್ ಪಾಟೀಲ್ ಅವರ ಸಹಾಯದಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ದಾಖಲಿಸಿ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಬೆಳ್ತಂಗಡಿ ಪೊಲೀಸರು ವೃದ್ಧೆಯ ಮನೆಯವರ ಪತ್ತೆಗಾಗಿ ಹುಡುಕಾಟ ನಡೆಸಿದ್ದು, ಇನ್ನೂ ಮನೆಯವರ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರಕಟಣೆ ಮೂಲಕ ಪತ್ತೆಗೆ ಮನವಿ ನೀಡಿದ್ದಾರೆ.