ಬೆಂಗಳೂರು: ಪರಿಶಿಷ್ಟ ಜಾತಿಯವರಿಗೆ ಕೊಡಬೇಕಿರುವ ಮನೆಗಳನ್ನು ೫ ಲಕ್ಷಕ್ಕೆ ಏರಿಸಬೇಕೆಂದು ತೀರ್ಮಾನ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಕೋಟ, ಈ ಬಗ್ಗೆ ಸಿಎಂ ಹಾಗೂ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಕೆಲವು ನಿರ್ಧಾರ ಮಾಡಲಾಗಿದ್ದು, ರಾಜ್ಯದಲ್ಲಿ 1 ಕೋಟಿ 20 ಲಕ್ಷ ಪರಿಶಿಷ್ಟ ಸಮಾಜ ಇದ್ದು, ಪರಿಶಿಷ್ಟ ಜಾತಿಯವರಿಗೆ ಮನೆ ಕಟ್ಟಲು 1 ಲಕ್ಷದ 75 ಸಾವಿರ ರೂಪಾಯಿ ಸೀಮಿತ ಇತ್ತು. ಹೀಗಾಗಿ ಮನೆ ಕಟ್ಟಲು ಆರ್ಥಿಕವಾಗಿ ತುಂಬಾ ಕಷ್ಟ ಇದ್ದ ಕಾರಣ, ಒಂದು ವರ್ಷ ಕಾಲ ಅನಗತ್ಯ ವೆಚ್ಚಗಳನ್ನು ಕಡಿತ ಗೊಳಿಸಿ, ಅನಿವಾರ್ಯವಲ್ಲದ ವೆಚ್ಚಗಳನ್ನು ಕಡಿತಗೊಳಿಸಲು ನಿರ್ಧಾರ ಮಾಡಲಾಗಿದೆ.
ಎಲ್ಲಾ ಬಡವರಿಗೆ ಮನೆ, ಶೌಚಾಲಯ, ವಿದ್ಯುತ್ ಆಗಬೇಕು, ಅಲ್ಲದೇ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಇರಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರಿಗೆ ಉತ್ತಮ ಶಿಕ್ಷಣ ಕೊಡಿಸಲು ಕೂಡಾ ಕ್ರಮ ವಹಿಸಿದ್ದೇವೆ, ಅದಕ್ಕಾಗಿಯೇ ಅನಗತ್ಯ ಅಲ್ಲದೇ ಇದ್ದರೂ ತುರ್ತು ಅಲ್ಲದಿರುವ ವೆಚ್ಚಗಳನ್ನು ನಿಯಂತ್ರಣ ಮಾಡುತ್ತೇವೆ ಎಂದು ಸಚಿವ ಕೋಟ ಹೇಳಿದ್ದಾರೆ.