ಬೆಂಗಳೂರು: ಕರಾವಳಿ ಮತ್ರು ರಾಜ್ಯದ ಇತರ ಜಿಲ್ಲೆಗಳಲ್ಲಿ ಬಿಜೆಪಿ ಮತ್ತು ಹಿಂದೂ ಪರ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ದುರುದ್ದೇಶಪೂರ್ವಕವಾಗಿ ದಾಖಲಿಸಿರುವ ಸುಳ್ಳು ಕೇಸ್ ಗಳನ್ನು ಪರಿಶೀಲಿಸಿ ವಾಪಸ್ ಒಡೆಯುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದ್ದಾರೆ.
ಇಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಖುದ್ದಾಗಿ ರಾಜ್ಯದ ಗೃಹ ಮಂತ್ರಿ ಆರಗ ಜ್ನಾನೇಂದ್ರರವರನ್ನು ಭೇಟಿಯಾದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಂಘಟನೆಗಳು ಕೊಟ್ಟಿದ್ದ ಮನವಿಯನ್ನು ಗೃಹ ಮಂತ್ರಿಗಳಿಗೆ ಹಸ್ತಾಂತರಿಸಿದರು.
ಈ ಹಿಂದೆ ಅನ್ಯ ಸಂಘಟನೆಯ ಕಾರ್ಯಕರ್ತರ ಪ್ರಕರಣಗಳನ್ನು ಹಿಂದಿನ ಸರ್ಕಾರ ವಾಪಾಸು ಪಡೆದಿದ್ದು ಅದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ಕೇಸುಗಳು ಬಾಕಿ ಉಳಿದಿದೆ ಎಂದು ಕರಾವಳಿ ಭಾಗದ ಹಿಂದೂ ಸಂಘಟನೆಗಳು ಕೊಟ್ಟಿದ್ದ ಮನವಿಯನ್ನು ಉಲ್ಲೇಖಿಸಿ ರಾಜ್ಯದಲ್ಲಿರುವ ಇಂತಹ ಪ್ರಕರಣಗಳನ್ನು ಕೂಡಲೇ ಮಾಹಿತಿ ಪಡೆದುಕೊಂಡು ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಕಾರ್ಯಕರ್ತರ ಮೇಲಿರುವ ಸುಳ್ಳು ಪ್ರಕರಣಗಳನ್ನು ತಕ್ಷಣ ವಾಪಾಸು ಪಡೆಯಬೇಕೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.
ಗೃಹ ಸಚಿವ ಆರಗ ಜ್ನಾನೇಂದ್ರರವರು ಈ ವಿಷಯಗಳನ್ನು ಕೂಡಲೇ ಗಮನಿಸಿ ಎಲ್ಲಾ ಜಿಲ್ಲೆಗಳಿಂದ ಮಾಹಿತಿಯನ್ನು ಪಡೆದು ಸಚಿವ ಸಂಪುಟದ ಮಂಡಿಸಿ ಸುಳ್ಳು ಕೇಸುಗಳನ್ನು ವಾಪಾಸು ಪಡೆಯುವ ಭರವಸೆ ನೀಡಿದರು.