ಬಂಟ್ವಾಳ; ಮನೆಯೊಂದರ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವುಗೈದಿರುವ ಘಟನೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕುದ್ದುಪದವು ಎಂಬಲ್ಲಿ ನಡೆದಿದೆ. ಇಲ್ಲಿನ ಕುದ್ದುಪದವು ನಿವಾಸಿ ಶರೀಫ್ ಕೆ.ಪಿ.ರವರ ಮನೆಯಲ್ಲಿ ಕಳ್ಳತನ ನಡೆದಿದೆ.
ಮನೆಯ ಆರ್ಸಿಸಿ ಮೇಲೆ ಹೋಗಲು ಇರುವ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಒಡೆದು ಒಳಗೆ ನುಗ್ಗಿದ ಕಳ್ಳರು ಮಲಗುವ ಕೋಣೆಯ ಕಪಾಟಿನ ಬಾಗಿಲು ಮುರಿದು ಅದರಲ್ಲಿದ್ದ 8 ಗ್ರಾಂ ತೂಕದ ಮಗುವಿನ ಕೈ ಚೈನ್-1, ತಲಾ 8 ಗ್ರಾಂ ತೂಕದ ಮಗುವಿನ ಕಾಲು ಚೈನ್ -2, 12 ಗ್ರಾಂ ತೂಕದ ಸರ, 12 ಗ್ರಾಂ ತೂಕದ ಬಳೆ-1, ಹಾಗೂ ಗಾಡ್ರೇಜ್ ನಲ್ಲಿದ್ದ 15 ಸಾವಿರ ರೂಪಾಯಿ ನಗದು ಕಳ್ಳವುಗೈದಿದ್ದಾರೆ.
ಒಟ್ಟು ಚಿನ್ನಾಭರಣಗಳು 48 ಗ್ರಾಂ ಆಗಿದ್ದು ಅದರ ಅಂದಾಜು ಮೌಲ್ಯ 96,000 ರೂಪಾಯಿ ಆಗಿದೆ ಎಂದು ಶರೀಫ್ ಅವರ ಪತ್ನಿ ಝಬೈದಾ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.