ವಿಟ್ಲ: ಹಿಜಾಬ್, ಅಜಾನ್, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹೀಗೆ ದಿನಕ್ಕೊಂದರಂತೆ ಗಲಾಟೆ ಗದ್ದಲಗಳು ನಡೆಯುತ್ತಿರುವಾಗಲೇ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಬೈರಿಕಟ್ಟೆ ಎಂಬಲ್ಲಿ ಕೋಮು ಸೌಹಾರ್ದತೆ ಸಾರುವ ಘಟನೆಯೊಂದು ನಡೆದಿದೆ.
ಅಂದ್ಹಾಗೆ ವಿಟ್ಲದ ಬೈರಿಕಟ್ಟೆ ನಿವಾಸಿಯಾಗಿರುವ ಚಂದ್ರಶೇಖರ್ ಜೆಡ್ಡು ಅವರ ವಿವಾಹ ಇದೇ ತಿಂಗಳ 24 (ಏಪ್ರಿಲ್ 24) ರಂದು ನಡೆದಿತ್ತು.ಸದ್ಯ ರಂಜಾನ್ ಉಪವಾಸವಿರೋದರಿಂದ ಅವರ ಮುಸ್ಲಿಂ ಸ್ನೇಹಿತರು ಮದುವೆಯಲ್ಲಿ ಭಾಗಿಯಾಗೋದಕ್ಕೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಬೈರಿಕಟ್ಟೆ ಜಲಾಲೀಯ ಜುಮ್ಮಾ ಮಸೀದಿಯಲ್ಲಿ ತನ್ನ ಮುಸ್ಲಿಂ ಸ್ನೇಹಿತರಿಗಾಗಿ ಇಫ್ತಾರ್ ಕೂಟ ಏರ್ಪಡಿಸಿ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಜಲಾಲೀಯಾ ಜುಮ್ಮಾ ಮಸೀದಿ ವತಿಯಿಂದ ಚಂದ್ರಶೇಖರ್ ಜೆಡ್ಡು ಅವರನ್ನು ಸನ್ಮಾನಿಸಿ ಅವರ ನೂತನ ಜೀವನಕ್ಕೆ ಶುಭ ಹಾರೈಸಲಾಯಿತು.
ಅಣ್ಣ ತಮ್ಮಂದಿರಂತಿದ್ದ ಹಿಂದೂ ಮುಸ್ಲಿಂರು ಇಂದು ಕಾರಣವಲ್ಲದ ಕಾರಣಗಳಿಗೆ ಯಾರದ್ದೋ ಪಿತೂರಿಗೆ ಬಲಿಯಾಗಿ ಬಡಿದಾಡುತ್ತಾ ತಮ್ಮ ತಮ್ಮೊಳಗೆ ದ್ವೇಷ, ಅಸೂಯೆ ಭಾವನೆಗಳನ್ನು ಬೆಳೆಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹದ್ದೊಂದು ನಡೆ ನಮ್ಮೆಲ್ಲರನ್ನು ಒಮ್ಮೆ ಈ ಬಗ್ಗೆ ಯೋಚಿಸುವಂತೆ ಮಾಡಿದೆ.