ಕಡಬ: ಇಲ್ಲಿನ ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪದ ಎನ್ಕಜೆಯಲ್ಲಿನ ಇಮ್ಯಾನ್ಯುವೆಲ್ ಎ.ಜಿ. ಚರ್ಚ್ನ ಗೋಪುರದ ಶಿಲುಬೆಯನ್ನು ಕಿತ್ತು ಕೇಸರಿ ಧ್ವಜ ಹಾಕಿದ್ದಲ್ಲದೇ, ಚರ್ಚ್ ನ ಒಳಗೆ ಹನಮುಂತ ಫೋಟೋ ಇಟ್ಟು, ಚರ್ಚ್ ಗೆ ಸಂಬಂಧಪಟ್ಟ ಕೆಲವು ಸಾಮಾಗ್ರಿಗಳಿಗೆ ಹಾನಿ ಮಾಡಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಇದೀಗ ಘಟನಾ ಸ್ಥಳಕ್ಕೆ ಎಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ತನಿಖಾ ಎಸ್ಐ ಭೇಟಿ ನೀಡಿದ್ದಾರೆ. ಪುತ್ತೂರು ಉಪ ವಿಭಾಗದ ಪೋಲೀಸ್ ಉಪ ಅಧೀಕ್ಷಕಿ ಗಾನಾ ಪಿ. ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಾರ್ಥನಾ ಮಂದಿರದ ಪ್ರಮುಖರನ್ನು ವಿಚಾರಣೆ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದ ಅವರು, ಪೋಲೀಸರು ಮಹಜರು ಮಾಡುತ್ತಿದ್ದಾರೆ. ತನಿಖೆ ನಡೆಯತ್ತಿದೆ ಎಂದಷ್ಟೇ ಹೇಳಿದರು. ಈ ಸಂದರ್ಭದಲ್ಲಿ ಕಡಬ ತನಿಖಾ ಎಸ್ಐ ಶ್ರೀಕಾಮತ್ ರಾತೋಡ್ , ಗುಪ್ತಚರ ಇಲಾಖಾ ಪೊಲೀಸ್ ಸಿಬ್ಬಂದಿ, ಕಡಬ ಪೋಲೀಸ್ ಸಿಬ್ಬಂದಿ ಹಾಗೂ ನೂಜಿಬಾಳ್ತಿಲ ಗ್ರಾಮ ಕರಣಿಕ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಇದಾದ ಬೆನ್ನಲ್ಲೇ ಸ್ಥಳಕ್ಕೆ ಉಪ್ಪಿನಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ ಕಂದಾಯ ಇಲಾಖೆಯವರು ಮಾಹಿತಿ ನೀಡಿ ಇಲ್ಲಿ ಚರ್ಚ್ ಎನ್ನಲಾದ ಪ್ರಾರ್ಥನಾ ಮಂದಿರದ ಅಡಿ ಸ್ಥಳಕ್ಕೆ ಯಾವುದೇ ಪಹಣಿ ಇರುವ ದಾಖಲೆಗಳಿಲ್ಲ. ಸದ್ಯಕ್ಕೆ ಇದು ಸರಕಾರಿ ಸ್ಥಳ ಎಂದು ಹೇಳಲಾಗಿದೆ ಎಂದಿದ್ದಾರೆ.