ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಬುಧವಾರ ಸಂಜೆಯ ವೇಳೆ ಗುಡುಗು – ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಕೆಲವೆಡೆ ಸಣ್ಣ ಪ್ರಮಾಣದ ಹಾನಿಯಾದ ಬಗ್ಗೆ ವರದಿಯಾಗಿದೆ.
ಮರೋಡಿ ಗ್ರಾಮದ ಕುಡ್ಯರಬೆಟ್ಟು ಯಶೋಧರ ಬಂಗೇರ ಅವರ ಮನೆಗೆ ಸಿಡಿಲು ಬಡಿದು, ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಕೊಟ್ಟಿಗೆಯಲ್ಲಿದ್ದ ದನವೊಂದು ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಬೆಳ್ತಂಗಡಿ- ಉಪ್ಪಿನಂಗಡಿ ಹೆದ್ದಾರಿಯ ಉರುವಾಲು ಗ್ರಾಮದ ಹಲೇಜಿ ಬಳಿ ಸಂಜೀವ ಮೂಲ್ಯ ಅವರ ಅಂಗಳದಲ್ಲಿದ್ದ ತೆಂಗಿನ ಮರವೊಂದು ರಸ್ತೆಗೆ ಬಿದ್ದು, ಒಂದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಇದರಿಂದ ಕೆಲ ಹೊತ್ತು ರಸ್ತೆ ಸಂಚಾರಕ್ಕೆ ತಡೆಯಾಗಿದ್ದು, ಸ್ಥಳೀಯರು ಮರವನ್ನು ತೆರವುಗೊಳಿಸಿದರು.
ಉರುವಾಲು ಗ್ರಾಮದ ಹಲೇಜಿ ಬಳಿ ಸುಧೀರ್ ಕೆ.ಎನ್. ಅವರ 10 ಅಡಿಕೆ ಮರ, ಹಲೇಜಿ ಸುಶೃತ ಭಟ್ ಅವರ 15 ಅಡಿಕೆ ಮರ, ಮಚ್ಚಿನ ಗ್ರಾಮದ ಕಲಾಯಿ ಪ್ರಶಾಂತ್ ಅವರ 5 ಅಡಿಕೆ ಗಿಡ ಧರೆಗೆ ಉರುಳಿವೆ. ಪ್ರಶಾಂತ್ ಅವರ ಪಂಪ್ಶೆಡ್ ಮೇಲೆ ಮರ ಬಿದ್ದು ಹಾನಿಯಾಗಿದೆ.
ಗರ್ಡಾಡಿ ಗ್ರಾಮದ ವಸಂತ ಭಂಢಾರಿ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಮನೆಯ ಗೋಡೆಯೂ ಬಿರುಕು ಬಿಟ್ಟಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.