Thursday, June 4, 2026
Homeಪ್ರಮುಖ-ಸುದ್ದಿಚಿಕ್ಕಮಗಳೂರಿನಲ್ಲಿ ವರುಣನ ರುದ್ರನರ್ತನ, ವ್ಯಕ್ತಿ ಬಲಿ, ಮೂಡಿಗೆರೆ-ಮಂಗಳೂರು ಸಂಚಾರ ಬಂದ್

ಚಿಕ್ಕಮಗಳೂರಿನಲ್ಲಿ ವರುಣನ ರುದ್ರನರ್ತನ, ವ್ಯಕ್ತಿ ಬಲಿ, ಮೂಡಿಗೆರೆ-ಮಂಗಳೂರು ಸಂಚಾರ ಬಂದ್

- Advertisement -
- Advertisement -

ಚಿಕ್ಕಮಗಳೂರು : ಕಳೆದ ಒಂದು ವಾರದಿಂದ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಮಳೆಯಿಂದಾಗಿ ಗುಡ್ಡ ಕುಸಿದು, ಮರ ಉರುಳಿ, ರಸ್ತೆಗಳೂ ಬಂದ್ ಆಗಿವೆ. ಮಲೆನಾಡಿನ ಮಳೆಯಿಂದ ಚಿಕ್ಕಮಗಳೂರಿನ ರೈತ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ.

ಈ ಮೂಲಕ ಮಲೆನಾಡಿನ ಮಳೆಗೆ ಮೊದಲ ಬಲಿಯಾದಂತಾಗಿದೆ. ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವನ್ನಪ್ಪಿದ್ದು, ಭಾರೀ ಗಾಳಿ-ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ತೋಟದಿಂದ ಹಿಂತಿರುಗುವಾಗ ವಿದ್ಯುತ್ ತಂತಿ ತುಳಿದು ಪರಮೇಶ್ವರಪ್ಪ ಎಂಬ 38 ವರ್ಷ ರೈತ ಸಾವನ್ನಪ್ಪಿದ್ದಾರೆ. ಕಡೂರು ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಚಿಕ್ಕಮಗಳೂರಿನಲ್ಲಿ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭದ್ರಾ ನದಿ ಇಕ್ಕೆಲಗಳ ಗದ್ದೆ ತೋಟಗಳು ಜಲಾವೃತವಾಗಿವೆ. ಅಡಿಕೆ ತೋಟದಲ್ಲಿ 2-3 ಅಡಿ ನೀರು ನಿಂತಿದೆ. ಮೈದುಂಬಿ ಹರಿಯುತ್ತಿರುವ ತುಂಗಾ-ಭದ್ರಾ, ಹೇಮಾವತಿ ನದಿಗಳಿಂದ ಅಕ್ಕಪಕ್ಕದ ಗ್ರಾಮಗಳಲ್ಲಿ ಭೀತಿ ಶುರುವಾಗಿದೆ. ಬಾಳೆಹೊನ್ನೂರು-ಕಳಸ ಸಂಚಾರ ಬಂದ್ ಆಗಿದ್ದು, ಮಲ್ಗೋಡ್ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಭಾರೀ ಮಳೆಗೆ ಮಲ್ಗೋಡ್ ಸೇತುವೆ ಜಲಾವೃತವಾಗಿದೆ.

ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 173 ಬಂದ್ ಆಗಿದ್ದು, ಮೂಡಿಗೆರೆ-ಮಂಗಳೂರು ಸಂಚಾರ ಸ್ಥಗಿತವಾಗಿದೆ. ಚಿಕ್ಕಮಗಳೂರು-ಮೂಡಿಗೆರೆ ಸಂಚಾರವೂ ಬಂದ್ ಆಗಿದೆ. ಮೂಡಿಗೆರೆ ತಾಲೂಕಿನ ಕುದ್ರೆಗುಂಡಿ ಬಳಿ ರಾತ್ರಿ ಮೂರು ಗಂಟೆಯಿಂದ ವಾಹನಗಳು ನಿಂತಲ್ಲೇ ನಿಂತಿವೆ.

- Advertisement -

Latest News

error: Content is protected !!