ಕಾರವಾರ : ಮೂರು ದಿನಗಳ ಹಿಂದೆ ಬಾವಿಯಲ್ಲಿ ಒಂದು ತಿಂಗಳ ಮಗುವಿನ ಶವ ಪತ್ತೆ ಆಗಿತ್ತು. ಈ ಹಸುಗೂಸಿನ ಸಾವಿನ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಹೆತ್ತ-ತಂದೆ ತಾಯಿಗಳೇ ಮಗುವನ್ನು ಹತ್ಯೆ ಮಾಡಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ.
ಯಲ್ಲಾಪುರ ತಾಲ್ಲೂಕಿನ ಸಹಸ್ರಳ್ಳಿ ರಾಮನಕೊಪ್ಪ ಗ್ರಾಮದ ಚಂದ್ರಶೇಖರ ಭಟ್ ಮತ್ತು ಈತನ ಪತ್ನಿ ಪ್ರಿಯಾಂಕ ಭಟ್ ಬಂಧಿತ ಆರೋಪಿಗಳು. ಆ.2 ರಂದು ರಾತ್ರಿ ಮಲಗಿದ್ದ ಮಗುವನ್ನು ಯಾರೋ ಎತ್ತಿಕೊಂಡು ಹೋಗಿ ಬಾವಿಯಲ್ಲಿ ಹಾಕಿ ಕೊಲೆ ಮಾಡಿದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರಿಗೆ 30 ದಿನಗಳ ಹಿಂದೆ ಜನಿಸಿದ ಮುದ್ದಾದ ಕಂದ ಬಾಯಿಯಲ್ಲಿ ಬಿದ್ದಿದ್ದನ್ನು ಕಂಡು ಕ್ರೂರಿಗಳ ಮನಸ್ಥಿತಿಗೆ ಪೊಲೀಸರು ಬೆಚ್ಚಿ ಬಿದ್ದಿದ್ದರು.
ಎಸ್ಪಿ ಶಿವಪ್ರಕಾಶ ನಿರ್ದೇಶನದಂತೆ, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿಐ ಸುರೇಶ ಯಳ್ಳೂರು ಹಾಗೂ ಪಿಎಸ್ ಐ ಮಂಜುನಾಥ ಗೌಡರ್ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಹಸುಗೂಸಿನ ಮನೆಯವರ ಮೇಲೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಹೆಣ್ಣು ಮಗು ಎಂಬ ಕಾರಣಕ್ಕೆ ಸ್ವತಃ ಹೆತ್ತ ತಂದೆ ತಾಯಿಗಳೇ ಮಗುವನ್ನು ಬಾವಿಗೆ ಹಾಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ತಿಳಿದುಬಂದಿದೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘಟನೆ ನಡೆದ 24 ಗಂಟೆಯಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.