ಹಾಸನ: ನನಗೆ ಬಲವಂತವಾಗಿ ತಾಳಿ ಕಟ್ಟಿ ನನ್ನನ್ನು ಕರೆದುಕೊಂಡಲಾಗಿದೆ ಎಂದು ಯುವತಿ ಪೋಲೀಸರ ಎದುರು ನೀಡಿದ ಹೇಳಿಕೆಯನ್ನು ಆಧರಿಸಿ ಯುವಕನನ್ನು ಸಕಲೇಶಪುರದ ಪೊಲೀಸರು ಬಂಧಿಸಿ, ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ಜನವರಿ 21ರಂದು ಸಕಲೇಶಪುರ ತಾಲ್ಲೂಕಿನ ಅರಕೆರೆ ಗ್ರಾಮದ ಸತೀಶ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿರುವ ಹುಡುಗಿಯ ಮನೆಗೆ ಆಗಮಿಸಿ ಆಕೆ ಮತ್ತು ಆಕೆಯ ತಾಯಿಯನ್ನ ಬೆದರಿಸಿ ಅವಳ ಮನೆಯಲ್ಲಿಯೇ ಬಲವಂತವಾಗಿ ಹಾರ ಬದಲಿಸಿಕೊಂಡು ತಾಳಿ ಕಟ್ಟಿ ತನ್ನ ಮನೆಗೆ ಕರೆದೊಯ್ದಿದ್ದ. ಪುತ್ತೂರು ಮೂಲದ ವರನೊಂದಿಗೆ ಮದುವೆ ನಿಶ್ಚಯವಾಗಿದ್ದ ಹುಡುಗಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಸತೀಶ್, ಆಕೆಗೆ ಮದುವೆ ಫಿಕ್ಸ್ ಆಗಿರುವುದು ಗೊತ್ತಾದ ಬಳಿಕ ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗಿತ್ತು.
ಹೀಗಾಗಿ ಆತನ ಸ್ನೇಹಿತರು ಅವನನ್ನು ಕರೆದುಕೊಂಡು ಹುಡುಗಿಯ ಮನೆಗೆ ಹೋಗಿ ಆಕೆಯ ಜೊತೆಗೇ ಸತೀಶನ ಮದುವೆ ಮಾಡಿಸಿದ್ದಾರೆ. ಅರಿಶಿಣ ಕೊಂಬು ಕಟ್ಟಿ ಸತೀಶ್ ಆಕೆಯನ್ನು ವರಿಸಿದ್ದಾನೆ. ನಮ್ಮನ್ನು ಬೆದರಿಸಿ ಸತೀಶ್ ನನ್ನ ಮಗಳನ್ನು ಮದುವೆಯಾಗಿದ್ದಾನೆ. ಇದು ಮಗಳಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ತಾಳಿಕಟ್ಟಿ ಕರೆದೊಯ್ದಿದ್ದಾನೆ. ಆಕೆಗೆ ಪ್ರಾಣ ಬೆದರಿಕೆ ಇದೆ, ರಕ್ಷಣೆ ಕೊಡಬೇಕೆಂದು ಹುಡುಗಿಯ ತಾಯಿ ಸಕಲೇಶಪುರ ನಗರ ಠಾಣೆಯಲ್ಲಿ ದೂರು ನೀಡಿದ್ದರು.
ಘಟನೆ ನಡೆದ ಮಾರನೇ ದಿನ ಬೆಳಗ್ಗೆ ಯುವಕ ಸತೀಶ್ ಮನೆ ಬಳಿಗೆ ಮಗಳನ್ನು ನೋಡಲೆಂದು ಆಕೆ ಪಾಲಕರು ಹೋಗಿದ್ದರು. ಆದರೆ, ಅಲ್ಲಿ ಯುವತಿ ಮತ್ತು ಸತೀಶ್ ಇರಲಿಲ್ಲ. ಆಕೆಯ ಫೋನ್ ಸಹ ಸ್ವಿಚ್ ಆಪ್ ಆಗಿತ್ತು. ಸತೀಶ್ ಫೋನ್ ರಿಸೀವ್ ಮಾಡುತ್ತಿರಲಿಲ್ಲ.
ದೂರು ದಾಖಲಿಸಿಕೊಂಡು ಸತೀಶ್ ಬಂಧನಕ್ಕೆ ಬಲೆಬೀಸಿದ ಪೊಲೀಸರು ಆರೋಪಿ ಸತೀಶ್ ಮತ್ತು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಪೋಲೀಸರ ಎದುರು ತನ್ನ ಪ್ರಥಮ ಹೇಳಿಕೆ ನೀಡಿರುವ ಯುವತಿ, ಸತೀಶ್ ನನಗೆ ಬಲವಂತವಾಗಿ ತಾಳಿಕಟ್ಟಿ ಕರೆದೊಯ್ದಿದ್ದಾಗಿ ಹೇಳಿಕೆ ನೀಡಿರುವುದು ಸತೀಶ್ಗೆ ಸಂಕಷ್ಟ ಎದುರಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಜಿತ್ ಕೃಷ್ಣ ಎಂಬಾತನ ಜತೆ ಯುವತಿಗೆ ಮದುವೆ ನಿಶ್ಚಯವಾಗಿದೆ. ಜ. 25ರಂದು ಮದುವೆ ಕೂಡಾ ಫಿಕ್ಸ್ ಆಗಿತ್ತು. ಆದ್ರೆ ಪಾಗಲ್ ಪ್ರೇಮಿ ಮಾಡಿರುವ ಎಡವಟ್ಟಿನಿಂದ ಆಕೆಯ ಮದುವೆಯ ಮುರಿದುಬಿದ್ದಿದೆ.