ಚಿಕ್ಕಮಗಳೂರು: ದೇವಸ್ಥಾನದಲ್ಲಿಯೇ ಮಹಿಳೆಯ ಮೇಲೆ ಪಾಪಿಗಳು ದೌರ್ಜನ್ಯವೆಸಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಅಂತರಘಟ್ಟೆ ಗ್ರಾಮದಲ್ಲಿ ನಡೆದಿದೆ. ಇನ್ನು ಈ ವೇಳೆ ದೌರ್ಜನ್ಯ ಪ್ರಶ್ನಿಸಿದ ಮಹಿಳೆಯ ಪತಿಯ ಕೈ ಬೆರಳನ್ನೇ ಮುರಿದಿದ್ದಾರೆ ಪಾಪಿಗಳು.
ಮಂಜನಾಯ್ಕ, ಶೀಲಾಬಾಯಿ ದಂಪತಿ ತಮ್ಮ ಮಗು ಜೊತೆ ಅಜ್ಜಂಪುರ ತಾಲೂಕಿನ ಅಂತರಘಟ್ಟೆ ದೇವಾಲಯಕ್ಕೆ ತೆರಳಿದ್ದರು. ದೇವಿ ಜಾತ್ರೆ ನಡೆದು ತಿಂಗಳಾದ ಹಿನ್ನೆಲೆ ತಿಂಗಳ ಪೂಜೆಗೆ ಹೋಗಿದ್ದರು. ಗಂಡ ದೇವರಿಗೆ ಎಡೆ ಕೊಡಲು ಹೋಗಿದ್ದರು. ಈ ವೇಳೆ ಹೆಂಡತಿ ಪೂಜೆಗೆ ರೆಡಿ ಮಾಡುತ್ತಿದ್ದರು. ಆಗ ದೇವಸ್ಥಾನಕ್ಕೆ ಬಂದ ಆರು ಕೀಚಕರು ದೇವಸ್ಥಾನದ ಆವರಣದಲ್ಲೇ ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗಲು ಮುಂದಾಗಿದ್ದಾರೆ. ದೇವಸ್ಥಾನದ ಆವರಣದಲ್ಲೇ ಆರು ಮದ್ಯವ್ಯಸನಿಗಳು ಪೂಜೆ ಮಾಡುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಎಲ್ಲೆಂದರಲ್ಲಿ ಕೈ ಹಾಕಿ ಲೈಂಗಿಕ ಹಿಂಸೆ ನೀಡಿದ್ದಾರೆ.
ಇದನ್ನು ಪ್ರಶ್ನೆ ಮಾಡಿದ ಗಂಡನ ಕೈ ಬೆರಳನ್ನ ಮುರಿದು, ನೆಲಕ್ಕಾಕಿ ತುಳಿದಿದ್ದಾರೆ. ಅಮ್ಮನ ಕಣ್ಣಲ್ಲಿ ನೀರು ಕಂಡು ಮಗು ಅಮ್ಮ ಎಂದು ಓಡಿ ಬಂದಾಗ ಮಗುವನ್ನ ಮೂಲೆಗೆ ತಳ್ಳಿದ್ದಾರೆ. ಮಕ್ಕಳ ಮೇಲೂ ಹಲ್ಲೆ ಮಾಡಿದ್ದಾರೆ. ಆರು ಜನರ ಮದ್ಯದ ಅಮಲನ್ನ ಎದುರಿಸಲಾಗದ ದಂಪತಿ ನಿರ್ಗತಿಕರಾಗಿದ್ದರು. ಅಲ್ಲೇ ಇದ್ದ ಇತರೇ ಭಕ್ತರು ಮೂಕ ಪ್ರೇಕ್ಷಕರಾಗಿದ್ದರು.
ಇದೀಗ ಐದು ಆರೋಪಿಗಳನ್ನ ಅಜ್ಜಂಪುರ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ನೀಚ ಬುದ್ದಿಯಿಂದ ಇಷ್ಟೆಲ್ಲಾ ಅವಾಂತರ ಮಾಡಿದ ದುರುಳರು ಪೊಲೀಸರಿಗೆ ಸಿಕ್ಕಿಬೀಳುತ್ತಲೇ ರಾಜಿಯಾಗುವ ನಾಟಕವಾಡಿದ್ದಾರೆ. ಕೊನೆಗೆ ದುರುಳರ ಹಣದ ಆಮಿಷಕ್ಕೆ ಬಲಿಯಾಗದ ಕುಟುಂಬಕ್ಕೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎನ್ನಲಾಗಿದೆ.