ಕಾಸರಗೋಡು: ತನ್ನ ಮಕ್ಕಳಿಬ್ಬರನ್ನು ಕೊಲೆಗೈದು ತಂದೆಯೊಬ್ಬ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಕಾಸರಗೋಡಿನ ಹೊಸದುರ್ಗದಲ್ಲಿ ನಡೆದಿದೆ.
ಚೆರ್ವತ್ತೂರ್ ಮಡಿಕುನ್ನು ನಿವಾಸಿ ರೂಪೇಶ್(38) ಆತನ ಹಾಗೂ ಮಕ್ಕಳಾದ ವೈದೇಹಿ(10) ಹಾಗೂ ಶಿವಾನಂದ್(6)ಮೃತಪಟ್ಟವರು. ರೂಪೇಶ್ ಮಕ್ಕಳನ್ನು ಕೊಲೆಗೈದ ನಂತರ ತಾನು ನೇಣಿಗೆ ಶರಣಾಗಿರಬೇಕೆಂದು ಸಂಶಯಿಸಲಾಗಿದೆ.
ರೂಪೇಶ್ ಹಾಗೂ ಪತ್ನಿ ಸವಿತಾ ಮಧ್ಯೆ ಕೆಲ ಸಮಯದಿಂದ ವೈಮನಸ್ಸು ಉಂಟಾಗಿತ್ತು. ಇದರಿಂದ ಸವಿತಾ ಹಾಗೂ ಇಬ್ಬರು ಮಕ್ಕಳು ಬೇರೆಯಾಗಿ ವಾಸಿಸುತ್ತಿದ್ದರು. ಆದರೆ, ರೂಪೇಶ್ ಮಕ್ಕಳನ್ನು ಆಗಾಗ ಮನೆಗೆ ಕರೆದುಕೊಂಡು ಬರುತ್ತಿದ್ದ.
ಮಂಗಳವಾರ ಮಗಳು ವೈದೇಹಿಯ ಜನ್ಮದಿನವಾಗಿತ್ತು. ಹೀಗಾಗಿ ಮಕ್ಕಳನ್ನು ನಡಿಕುನ್ನುವಿನ ತನ್ನ ತರವಾಡು ಮನೆಗೆ ಕರೆತಂದು, ಅಲ್ಲಿಂದ ತನ್ನ ಹೊಸ ಮನೆ ನಿರ್ಮಾಣವಾಗುತ್ತಿರುವಲ್ಲಿಗೆ ತೆರಳಿದ್ದ. ಅಲ್ಲಿ ಮಕ್ಕಳನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ನಿನ್ನೆ ರೂಪೇಶ್ ಮೃತದೇಹ ಹೊಸ ಮನೆಯ ಸಿಟೌಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮಕ್ಕಳಿಬ್ಬರ ಮೃತದೇಹ ಕೊಠಡಿಯೊಳಗೆ ಕಂಡುಬಂದಿತ್ತು. ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


