ಬೆಂಗಳೂರು: ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ತರಕಾರಿ ತರಲು ಹೋಗಿ ವಿಳಾಸ ಮರೆತು ರಸ್ತೆ ಬದಿ ಅಳುತ್ತಾ ನಿಂತಿದ್ದ ವೃದ್ಧೆಯೊಬ್ಬರನ್ನು ಅವರ ಮಗಳ ಮನೆ ಸೇರಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ತಮಿಳುನಾಡಿನ ತಿರುವಣ್ಣಾಮಲೈ ನಿಂದ ಬೆಂಗಳೂರಿಗೆ ಪುತ್ರ ರಾಜೇಶ್ ಮತ್ತು ಸೊಸೆ ಗೌತಮಿ ಜತೆ ರೈಲಿನಲ್ಲಿ ಬೆಂಗಳೂರಿಗೆ ಜೂನ್ 16ರಂದು ಬಂದಿದ್ದ ವಾಸಂತಿ ಅವರು, ಕಸ್ತೂರಿನಗರದ ಮನೆಯಲ್ಲಿದ್ದರು. ಕೆಲ ಹೊತ್ತಿನ ಬಳಿಕ ತರಕಾರಿ ತರಲು ಮನೆಯಿಂದ ಹೊರಗಡೆ ಹೋಗಿದ್ದಾರೆ. ಮನೆಯ ರಸ್ತೆ ಗೊತ್ತಾಗದೆ ಠಾಣೆ ವ್ಯಾಪ್ತಿಯ ಚಾರ್ಲಸ್ ಶಾಲೆ ಬಳಿ ನಿತ್ರಾಣಗೊಂಡು ಕುಳಿತಿದ್ದರು. ವೃದ್ಧೆಯನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಜಯಣ್ಣ, ಮಲ್ಲಪ್ಪ ಸಂತಿ ಮಹಿಳೆ ಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಠಾಣೆಯಲ್ಲಿದ್ದ ಎಎಸ್ಐ ಸುಂದರ್ರಾಜ್ ಮಹಿಳೆಯನ್ನು ವಿಚಾರಿಸಿ, ಬಳಿಕ ತಮಿಳುನಾಡಿನ ಹರಣಿ ಠಾಣೆಗೆ ಕರೆ ಮಾಡಿ, ವಾಸಂತಿ ಅವರ ಪತಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ಅವರಿಂದ ಪುತ್ರ ರಾಜೇಶ್ ಮೊಬೈಲ್ ನಂಬರ್ ಸಂಗ್ರಹಿಸಿ ಠಾಣೆಗೆ ಕರೆಸಿಕೊಂಡು ಪುತ್ರ ಮತ್ತು ಸೊಸೆ ಜತೆ ವಾಸಂತಿ ಅವರನ್ನು ಕಳುಹಿಸಿದ್ದಾರೆ. ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಎಎಸ್ಐ ಸುಂದರ್ ರಾಜ್, ಸಿಬ್ಬಂದಿ ಜಯಣ್ಣ, ಮಲ್ಲಪ್ಪ ಸಂತಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.