ಪುತ್ತೂರು: ಇಲ್ಲಿನ ಬನ್ನೂರು ಗ್ರಾಮದ ಸ. ನಂ. 84ರಲ್ಲಿ 40 ಎಕರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಶೈಕ್ಷಣಿಕ ಉದ್ದೇಶಕ್ಕೆ ಮೀಸಲಿಟಿದ್ದ ಭೂಮಿಯನ್ನು ಕೇಂದ್ರ ಸರ್ಕಾರ ಸೀ ಫುಡ್ ಪಾರ್ಕ್ ಮಾಡಲ ಪ್ರಸ್ತಾವನೆ ಸಲ್ಲಿಸಿದೆ. ಹಾಗಾಗಿ ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇದ್ದಲ್ಲಿ ಬನ್ನೂರು ಗ್ರಾಮ ಕರಣಿಕರಿಗೆ ಲಿಖಿತ ರೂಪದಲ್ಲಿ ನೀಡುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.
ಈ ಸಾರ್ವಜನಿಕ ಪ್ರಕಟಣೆ ಇದೀಗ ಸೋಷಿಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ಬಗ್ಗೆ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಶೈಕ್ಷಣಿಕ ಉದ್ದೇಶಕ್ಕೆ ಮೀಸಲಿಟಿದ್ದ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಿದ್ರೆ ಉಗ್ರ ಹೋರಾಟ ಮಾಡೋದಾಗಿ ಹೇಳಿದ್ದಾರೆ.
ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಆಗಬೇಕು ಎಂಬ ಪುತ್ತೂರಿನ ಜನತೆಯ ಕನಸನ್ನು ಪೂರ್ಣಗೊಳಿಸುವ ಪ್ರಮಾಣಿಕ ಪ್ರಯತ್ನವಾಗಿ ನನ್ನ ಶಾಸಕತ್ವದ ಅವಧಿಯಲ್ಲಿ 40 ಎಕರೆ ಸರಕಾರಿ ಭೂಮಿಯನ್ನು ಕಾಯ್ದಿರಿಸಲಾಗಿದೆ. ಆದರೆ ಈಗ ಈ ಜಮೀನನ್ನು ಬೇರೆ ಯೋಜನೆಗೆ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಸರ್ಕಾರದ ಯಾವುದೇ ಹೂಸ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಹೊಸ ಯೋಜನೆಗೆ ಹೊಸ ಭೂಮಿಯನ್ನು ಕಾಯ್ದಿರಿಸಿ, ಮೆಡಿಕಲ್ ಕಾಲೇಜಿಗೆ ಇಟ್ಟ ಭೂಮಿಯನ್ನು ಬದಲಾಯಿಸಲು ಹೊರಟರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದಿದ್ದಾರೆ. ಇದು ವೈಯುಕ್ತಿಕ ಹೋರಾಟವಲ್ಲ, ಪುತ್ತೂರಿನ ಕನಸನ್ನು ಪೂರ್ಣ ಮಾಡುವ ಹೋರಾಟ. ನಿಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಮಾಜಿ ಶಾಸಕಿಯ ಪೋಸ್ಟ್ ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.
ಪುತ್ತೂರಿನಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳಲ್ಲಿದ್ದರೂ ಬಡ ಜನರ ಅನುಕೂಲಕ್ಕಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದು ಬೇಕು ಅನ್ನೋ ಕೂಗು ಇಂದು ಮೊನ್ನೆಯದಲ್ಲ. ಆದ್ರೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ಸೀ ಫುಡ್ ಪಾರ್ಕ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿರೋದು ದೇವರು ಕೊಟ್ಟರು ಪೂಜಾರಿ ಬಿಡಲಿಲ್ಲ ಅನ್ನುವಂತೆ ಮಾಡಿದೆ.